ADVERTISEMENT

ಬಾಂಬ್ ಮಾದರಿ ವಸ್ತು ಸಿಕ್ಕಿದೆ, ಪರೀಕ್ಷೆ ನಡೆಯುತ್ತಿದೆ-ರೈಲ್ವೆ ಎಡಿಜಿಪಿ

ರಾಜ್ಯದ ಎಲ್ಲಾ ರೈಲು, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

​ಪ್ರಜಾವಾಣಿ ವಾರ್ತೆ
Published 31 ಮೇ 2019, 5:43 IST
Last Updated 31 ಮೇ 2019, 5:43 IST
   

ಬೆಂಗಳೂರು: ನಗರ ಕೇಂದ್ರ ರೈಲು ನಿಲ್ದಾಣದಲ್ಲಿ ದೊರೆತ ಬಾಂಬ್ ಮಾದರಿ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರಲ್ಲಿ ಇರುವ ವಸ್ತುಗಳು ಯಾವುವು ಎಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ರೈಲ್ವೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.

ಈ ಘಟನೆಯಿಂದ ನಗರ ರೈಲು ನಿಲ್ದಾಣದಿಂದ ಹೊರಡಬೇಕಾದ ಎಲ್ಲಾ ರೈಲುಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿ ಕಳುಹಿಸಲಾಗುತ್ತಿದೆ.ಇದರಿಂದಾಗಿ ಎಲ್ಲಾ ರೈಲುಗಳು ಎರಡು ಗಂಟೆಗಳ ತಡವಾಗಿ ಹೊರಡುತ್ತಿವೆ. ಯಾವುದೇ ಆತಂಕ ಇಲ್ಲಎಂದು ಅವರು ತಿಳಿಸಿದ್ದಾರೆ.

ಸಿಕ್ಕಿದ ಅನುಮಾನಾಸ್ಪದವಸ್ತುವಿನಲ್ಲಿ ಬಾಂಬ್‌ಗೆ ಬಳಸಲಾಗುವ ವಸ್ತುಗಳೂ ಇವೆ. ಆದರೆ, ಯಾವ ವಸ್ತು ಎಂಬುದು ಸದ್ಯಕ್ಕೆ ತಿಳಿಯುತ್ತಿಲ್ಲ. ಬಾಂಬ್ ಮಾದರಿ ವಸ್ತು ಸಿಕ್ಕಿದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಆದರೆ, ಬೇರೆ ಕಡೆಗಳಲ್ಲಿ ಇರುವ ಕ್ಯಾಮರಾಗಳಲ್ಲಿ ಇರುವ ವಿಡಿಯೋವನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

ADVERTISEMENT

ಬೆಳಗ್ಗೆ 8.30ಕ್ಕೆ ರೈಲ್ವೆ ಬೋಗಿಯ ಪಕ್ಕದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾಗಿರುವ ವಿಷಯ ತಿಳಿಯಿತು. ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ರಾಜ್ಯದ ಎಲ್ಲಾನಿಲ್ದಾಣಗಳಲ್ಲಿ ಹೈ ಅಲರ್ಟ್:ಈ ಘಟನೆಯಿಂದಾಗಿ ರಾಜ್ಯದ ಎಲ್ಲಾ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಅಲ್ಲದೆ, ಬೆಂಗಳೂರಿಗೆ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ನಗರಕ್ಕೆ ಬರುವ ಎಲ್ಲಾ ಬಸ್ಸುಗಳು, ರೈಲುಗಳನ್ನು ತೀವ್ರತಪಾಸಣೆಗೆ ಒಳಪಡಿಸಲಾಗುತ್ತಿದೆ. ಶ್ವಾನದಳ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು ಪ್ರತಿಯೊಂದು ವಸ್ತುವನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
ವಿಶೇಷ ತನಿಖಾ ತಂಡ: ರಾಜ್ಯಗುಪ್ತಚರ ಇಲಾಖೆ, ನಗರ ಪೊಲೀಸರು, ಜಿಆರ್ ಪಿ, ಆರ್ ಎಎಫ್ ಪೊಲೀಸರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿದ್ದು, ಈ ತಂಡ ತನಿಖೆ ನಡೆಸುತ್ತಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.