ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಧ್ಯಾಪಕನ ಮೇಲೆ #ಮೀಟೂ ಆರೋಪ ಕೇಳಿ ಬಂದಿದ್ದು, ಇವರ ವಿರುದ್ಧಆಡಳಿತ ಮಂಡಳಿ ಶಿಸ್ತಿನ ಕ್ರಮ ಕೈಗೊಂಡಿದೆ.
ಇಲ್ಲಿನ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಗಿರಿಧರ್ ಮದ್ರಾಸ್ ಆರೋಪ ಎದುರಿಸುತ್ತಿರುವ ಪ್ರಾಧ್ಯಾಪಕ. ಇವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪಿಎಚ್ಡಿ ವಿದ್ಯಾರ್ಥಿಯು ಸಂಸ್ಥೆಯ ಆಂತರಿಕ ದೂರು ಸಮಿತಿಗೆ ದೂರು ನೀಡಿದ್ದರು.
ಗಿರಿಧರ್ ಅವರು ಸತತ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಆಡಳಿತ ಸಮಿತಿಯು ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಇದಾದ ಬಳಿಕ ಸಂಸ್ಥೆ ಬಿಡುವಂತೆ ಗಿರಿಧರ್ಗೆ ಸೂಚಿಸಲಾಗಿದೆ ಎಂದು ಐಐಎಸ್ಸಿ ನಿರ್ದೇಶಕ ಪ್ರಾಧ್ಯಾಪಕ ಅನುರಾಗ್ ಕುಮಾರ್ ಹೇಳಿದ್ದಾರೆ.
ಇದುವರೆಗೆ ಗಿರಿಧರ್ ಅವರು ಯಾವುದೇ ಕರೆ ಮತ್ತು ಸಂದೇಶಗಳಿಗೆ ಸ್ಪಂದಿಸಿಲ್ಲ.
ಐಐಎಸ್ಸಿ ಸಂಸ್ಥೆಯ ನಿಯಮದ ಪ್ರಕಾರ, ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಗಳನ್ನು ಸಂಸ್ಥೆಯು ಬೆಂಬಲಿಸುವುದಿಲ್ಲ. ಮಹಿಳಾ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ದೌರ್ಜನ್ಯ ಎಸಗಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.
ಗಿರಿಧರ್ ಮದ್ರಾಸ್ ಯಾರು?
ಮದ್ರಾಸಿನ ಐಐಟಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 2009ರಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕ ಸಂಶೋಧನಾ ಮಂಡಳಿ (ಸಿಎಸ್ಐಆರ್) ನೀಡುವ ಪ್ರತಿಷ್ಠಿತ ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿ, ಜೆಸಿ ಬೋಸ್ ನ್ಯಾಷನಲ್ ಫೆಲೋಶಿಪ್ , ಸಂಶೋಧನೆಗೆ ಐಐಎಸ್ಸಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಅಮೆರಿಕದಲ್ಲಿ ಡಾಕ್ಟರೇಟ್ ಮುಗಿಸಿದ ಇವರು ರಾಸಾಯನಿಕ ಎಂಜಿನಿಯರಿಂಗ್ ಕ್ಷೇತ್ರದ ಅಭಿವೃದ್ಧಿ ಕುರಿತಾಗಿ ಮಹತ್ತರ ಸಂಶೋಧನೆ ಕೈಗೊಂಡಿದ್ದಾರೆ.
ಇದು ಮೊದಲಲ್ಲ
ಈ ಹಿಂದೆ 2015ರಲ್ಲಿ ಪ್ರೊಫೆಸರ್ ಎಸ್ ದುರ್ಗಪ್ಪ ಅವರ ವಿರುದ್ಧ ವಿದ್ಯಾರ್ಥಿಯು ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.