ADVERTISEMENT

ಜಿ ರಾಮ್‌ ಜಿ ಹಿಂಪಡೆದು ಮನರೇಗಾ ಕಾಯ್ದೆ ಮರುಸ್ಥಾಪಿಸುವವರೆಗೆ ಹೋರಾಟ: ಸಿಎಂ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:43 IST
Last Updated 3 ಜನವರಿ 2026, 7:43 IST
   

ಬೆಂಗಳೂರು: ‘ಕೇಂದ್ರ ಸರ್ಕಾರ ಹೊಸತಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ (ವಿಬಿ– ಜಿ ರಾಮ್‌ ಜಿ) ಕಾಯ್ದೆಯನ್ನು ಹಿಂಪಡೆದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಕಾಯ್ದೆಯನ್ನು ಮರುಸ್ಥಾಪಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮತನಾಡಿದ ಅವರು, ‘ಹಳೆ ಕಾಯ್ದೆಯನ್ನೇ (ಮನರೇಗಾ) ಮತ್ತೆ ಜಾರಿಗೆ ತರುವ ಮೂಲಕ ಬಡವರ, ದಲಿತರ, ಮಹಿಳೆಯರ ಹಾಗೂ ಸಣ್ಣ ರೈತರ ಉದ್ಯೋಗದ ಹಕ್ಕು ಪುನರ್‌ ಸ್ಥಾಪಿಸಬೇಕು. ಅಷ್ಟೇ ಅಲ್ಲ, ಪಂಚಾಯಿತಿಗಳ ಸ್ವಯಂ ಆಡಳಿತ ಹಕ್ಕು ಮರುಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

‘ಈ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು. ಹೊಸ ಕಾಯ್ದೆಯನ್ನು ಅಮಾನತಿನಲ್ಲಿ ಇಟ್ಟು, ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ನಡೆಸಬೇಕು ಎಂದು ಪ್ರಧಾನಿಗೆ ನಾನು ಈಗಾಗಲೇ ಪತ್ರ ಬರೆದಿದ್ದೇನೆ’ ಎಂದರು.

ADVERTISEMENT

‘ಮನರೇಗಾ ಕಾಯ್ದೆಯು ಕೇವಲ ಉದ್ಯೋಗ ನೀಡಲು ಮಾತ್ರ ಸೀಮಿತ ಆಗಿರಲಿಲ್ಲ. ಅದೊಂದು ಐತಿಹಾಸಿಕ ನಿರ್ಣಯವಾಗಿತ್ತು. ಗಾಂಧೀಜಿಯವರ ಗ್ರಾಮ ಸ್ವರಾಜ್‌ ಕನಸು ನನಸು ಮಾಡುವ ಯೋಜನೆ ಅದಾಗಿತ್ತು. ಗಾಂಧೀಜಿಯವರನ್ನು ಗೋಡ್ಸೆ ಕೊಂದರು. ಹೊಸ ಯೋಜನೆಯ ಮೂಲಕ ಈಗ ಎರಡನೇ ಬಾರಿಗೆ ಗಾಂಧೀಜಿಯವರನ್ನು ಬಿಜೆಪಿಯವರು ಕೊಂದು ಹಾಕುತ್ತಿದ್ದಾರೆ. ಇಷ್ಟೊಂದು ದ್ವೇಷ ಇರಬಾರದು’ ಎಂದರು.

‘ಹೊಸ ಕಾಯ್ದೆಯನ್ನು ನಮ್ಮ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ’ ಎಂದು ಹೇಳಿದ ಮುಖ್ಯಮಂತ್ರಿ, ‘ಇಡೀ ದೇಶದಲ್ಲಿ ಮನರೇಗಾ ಕಾಯ್ದೆಯನ್ನು ಮತ್ತೆ ಸ್ಥಾಪಿಸಬೇಕು. ಹಳೆ ಕಾಯ್ದೆಯನ್ನು ವಾಪಸ್‌ ಪಡೆದಿರುವುದು ಮಹಿಳೆಯರಿಗೆ, ಸಣ್ಣ ರೈತರಿಗೆ ಮಾಡಿದ ದ್ರೋಹ’ ಎಂದು ವಾಗ್ದಾಳಿ ನಡೆಸಿದರು.

‘ರೈತರು ಹೋರಾಟ ಮಾಡಿ ತಮ್ಮ ವಿರುದ್ಧವಾಗಿದ್ದ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆಯುವಂತೆ ಮಾಡಿದ್ದರು. ಅದೇ ರೀತಿ ಸಾರ್ವಜನಿಕರು, ಕೂಲಿ ಕಾರ್ಮಿಕರು, ಸಂಘ ಸಂಸ್ಥೆಗಳ ಜೊತೆ ಸೇರಿ ನಾವೂ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ವಿಬಿ– ಜಿ ರಾಮ್‌ ಜಿ ಕಾಯ್ದೆ ವಾಪಸ್‌ ಪಡೆಯುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

‘ಶುಕ್ರವಾರ (ಜ. 2) ನಡೆದ ಸಚಿವ ಸಂಪುಟ ಸಭೆಯಲ್ಲಿ ಮನರೇಗಾ ಬಗ್ಗೆ ಚರ್ಚೆ ಮಾಡಿದ್ದೇವೆ. 20 ವರ್ಷಗಳ ಹಿಂದೆ ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದಾಗ ಈ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯನ್ನು ಈಗ ವಾಪಸ್‌ ಪಡೆದು, ಕೇಂದ್ರ ಸರ್ಕಾರ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) (ವಿಬಿ– ಜಿ ರಾಮ್‌ ಜಿ) ಎಂಬ ಹೊಸ ಕಾಯ್ದೆ ಮಾಡಿದೆ’ ಎಂದರು.

‌‘ಮನರೇಗಾ ಕಾಯ್ದೆಯನ್ನು ವಾಪಸ್‌ ಪಡೆಯುವ ಮೊದಲು ಮೋದಿ ಸರ್ಕಾರ ಯಾರ ಜೊತೆಗೂ ಚರ್ಚೆ ಮಾಡಿಲ್ಲ. ಒಂದು ರೀತಿಯಲ್ಲಿ ಸರ್ವಾಧಿಕಾರ ಧೋರಣೆ ಪ್ರದರ್ಶನ ಮಾಡಿದೆ. ಈ ಮಸೂದೆ ಡಿ. 17ರಂದು ಸಂಸತ್‌ನಲ್ಲಿ ಮಂಡನೆಯಾಗಿ 18ರಂದು ಕಾಯ್ದೆ ಆಗಿದೆ. ದೇಶದಲ್ಲಿ ಸುಮಾರು 12.16 ಕೋಟಿ ನರೇಗಾ ಕಾರ್ಮಿಕರಿದ್ದಾರೆ. ಅದರಲ್ಲಿ 6.21 ಕೋಟಿ ಮಹಿಳೆಯರಿದ್ದಾರೆ. ಅದರಲ್ಲಿ ಪರಿಶಿಷ್ಟ ಜಾತಿಯವರು ಶೇ 17ರಷ್ಟಿದ್ದಾರೆ. ಪರಿಶಿಷ್ಟ ವರ್ಗದವರು ಶೇ 11ರಷ್ಟಿದ್ದಾರೆ. ಕರ್ನಾಟಕದಲ್ಲಿ 71.18 ಲಕ್ಷ ಸಕ್ರಿಯ ನರೇಗಾ ಕಾರ್ಮಿಕರಿದ್ದಾರೆ. ಇದರಲ್ಲಿ 36.75 ಲಕ್ಷ ಮಹಿಳೆಯರು (ಶೇ 51.60)’ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

‘ಜನರು ನೆಮ್ಮದಿಯಿಂದ ಜೀವಿಸುವ ವಾತಾವರಣಕ್ಕೆ ಕಾರಣವಾಗಿರುವ ಕಾನೂನುಗಳನ್ನು ನಾಶ ಮಾಡುವುದೇ ಬಿಜೆಪಿಯವರ ಕೆಲಸ. ಇದಕ್ಕೆ ಬಿಜೆಪಿಯವರ ಆರ್‌ಎಸ್‌ಎಸ್‌ ಮಾರ್ಗದರ್ಶಕರು. ಹಿಂದಿನ ಕಾಯ್ದೆಯನ್ನು ನಾಶ ಮಾಡಿ, ಅದರಿಂದ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಲು ಕೇಂದ್ರ ಸರ್ಕಾರ ಹೊರಟಿದೆ’ ಎಂದರು.

‘ಹಳೆ ಕಾಯ್ದೆಯ ಪ್ರಕಾರ ಇದ್ದ ಜಾಗದಲ್ಲಿಯೇ ಕೆಲಸ ಸಿಗುವ ಜೊತೆಗೆ, ಕಾರ್ಮಿಕರು ತಮ್ಮ ಮಕ್ಕಳನ್ನು ಹತ್ತಿರದ ಶಾಲೆಗೆ ಕಳುಹಿಸಬಹುದಿತ್ತು. ಆಸ್ತಿ ಸೃಜನೆ ಆಗುತ್ತಿತ್ತು. ಅವರಿಗೆ ಉದ್ಯೋಗ ಸಿಗುತ್ತಿತ್ತು. ಉದ್ಯೋಗ ಕೇಳಿ ಪಡೆಯುವ ಹಕ್ಕು ಅವರಿಗೆ ಇತ್ತು’ ಎಂದರು. 

‘ಮನರೇಗಾ ಯೋಜನೆ ಜಾರಿಗೆ ಬರುವಾಗಲೇ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದ್ದರು. ಆಗ ಆಹಾರ ಭದ್ರತಾ ಕಾಯ್ದೆಯನ್ನು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿಯವರು ಗೇಲಿ ಮಾಡಿದ್ದರು. ‘ಇದು ಆಹಾರ  ಗ್ಯಾರಂಟಿ ಅಲ್ಲ. ಮತ ಗ್ಯಾರಂಟಿ’ ಎಂದು ಟೀಕೆ ಮಾಡಿದ್ದರು. ಯೋಜನೆಗಳ ಹೆಸರು ಬದಲಾಯಿಸುವುದು ಬಿಜೆಪಿಯವರ ಸಾಧನೆ. ಕಳೆದ 11 ವರ್ಷಗಳಲ್ಲಿ ಬಿಜೆಪಿಯವರು 30 ಯೋಜನೆಗಳ ಹೆಸರು ಬದಲಾಯಿಸಿದ್ದಾರೆ ಅಥವಾ ಕಾನೂನುಗಳನ್ನೇ ವಾಪಸ್‌ ಪಡೆದಿದ್ದಾರೆ. ನಿರ್ಮಲ ಭಾರತ್‌ – ಸ್ವಚ್ಛ ಭಾರತ್‌, ಇಂದಿರಾ  ಆವಾಜ್‌ ಯೋಜನೆ– ಪ್ರಧಾನಮಂತ್ರಿ ಆವಾಸ್‌ ಯೋಜನೆ, ಪಂಚ ವಾರ್ಷಿಕ ಯೋಜನೆ– ನೀತಿ ಆಯೋಗ ಹೀಗೆ ಮಾಡಿ ಅನೇಕ ಯೋಜನೆಗಳನ್ನು ಬುಡಮೇಲು ಮಾಡಿದ್ದಾರೆ. ಈ ಎಲ್ಲ ವಿವರಗಳ ಸಹಿತ ನಾನು ಪ್ರಧಾನಿಗೆ ಡಿ. 30ರಂದು ಪತ್ರ ಬರೆದಿದ್ದೇನೆ’ ಎಂದರು.

‘ಹಳೆ ಕಾಯ್ದೆಯ ಪ್ರಕಾರ ವರ್ಷದಲ್ಲಿ ಕನಿಷ್ಠ 100 ದಿನ ಕೆಲಸ ಕೊಡಬೇಕಿತ್ತು. ಕಾರ್ಮಿಕರು, ಸಣ್ಣ ರೈತರು ಎಲ್ಲಿ ವಾಸ ಮಾಡುತ್ತಾರೆಯೊ ಅಲ್ಲಿಯೇ. ಆದರೆ, ಹೊಸ ಕಾಯ್ದೆ ಪ್ರಕಾರ, ಎಲ್ಲಿ ಅಧಿಸೂಚನೆ ಹೊರಡಿಸುತ್ತಾರೊ ಅಲ್ಲಿ ಕೆಲಸ ಕೊಡಬೇಕು. ಹೀಗೆ ಮಾಡಿ ಹಕ್ಕು ಕಸಿದುಕೊಳ್ಳುವ ಅಂಶ ಹೊಸ ಕಾಯ್ದೆಯಲ್ಲಿದೆ. ಹಳೆ ಕಾಯ್ದೆಯಿಂದ ಪ್ರತಿ ಗ್ರಾಮ ಕೂಡಾ ಲಾಭ ಪಡೆಯಬಹುದಿತ್ತು. ಈಗ ಆ ಲಾಭ ಪಡೆಯಲು ಅವಕಾಶ ಇಲ್ಲ. ಸೂಚಿಸಿದ ಜಾಗದಲ್ಲಿ ಮಾತ್ರ ಕೆಲಸ ಮಾಡಬೇಕು. ಕಾರ್ಮಿಕರಿಗೆ ಇಡೀ ವರ್ಷ ಕೆಲಸ ಸಿಗುತ್ತಿತ್ತು. ಕೆಲಸ ಇಲ್ಲದೇ ಇದ್ದಾಗ ಕೆಲಸ ಕೊಡಬೇಕಿತ್ತು. ಈಗ ಕೃಷಿ ಚಟುವಟಿಕೆ ಇರುವ 60 ದಿನ ಕೆಲಸವನ್ನು ನಿಷೇಧಿಸಲಾಗಿದೆ’ ಎಂದರು.

‘ಮನರೇಗಾ ಕಾಯ್ದೆಯಲ್ಲಿ ಕೇಂದ್ರ ಸರ್ಕಾರವೇ ಪೂರ್ಣವಾಗಿ ವೆಚ್ಚ ಭರಿಸುತ್ತಿತ್ತು. ಈಗ ಕೇಂದ್ರ ಸರ್ಕಾರ ಶೇ 60, ರಾಜ್ಯ ಸರ್ಕಾರ ಶೇ 40 ಕೊಡಬೇಕಿದೆ. ಆ ಮೂಲಕ, ರಾಜ್ಯಗಳ ಮೇಲೆ ಹೊರೆ ಹೊರಿಸಲಾಗಿದೆ’ ಎಂದರು. 

‘ಕೇಂದ್ರ ಸರ್ಕಾರ ಹೊಸ ನಡೆ ವಿಕೇಂದ್ರೀಕರಣಕ್ಕೆ, ಒಕ್ಕೂಟ ವ್ಯವಸ್ಥೆಗೆ, ಸಂವಿಧಾನಕ್ಕೆ ವಿರುದ್ಧವಾಗಿದೆ. ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ, ಗ್ರಾಮ ಸಭೆಗೆ ಮತ್ತು ಗ್ರಾಮ ಪಂಚಾಯಿತಿಗೆ ಇದ್ದ ಅಧಿಕಾರವನ್ನು ಈಗ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಮನುಸ್ಮೃತಿಯು, ‘ಮಹಿಳೆಯರು, ದಲಿತರು, ಶೂದ್ರರ ಬಳಿ ಹಣ ಇರಬಾರದು. ಸ್ವಾಭಿಮಾನದಿಂದ ಬದುಕಬಾರದು. ಅವರು ಸಂಪೂರ್ಣ ಸೇವಕರಾಗಿರಬೇಕು’ ಎಂದು ಹೇಳುತ್ತದೆ. ಅದರಿಂದ ಪ್ರೇರೇಪಣೆ ಪಡೆದವರು ಆರ್‌ಎಸ್‌ಎಸ್‌ನವರು. ಅವರು ಬಿಜೆಪಿ ಸರ್ಕಾರಕ್ಕೆ ಮಾರ್ಗದರ್ಶಕರು’ ಎಂದರು.

‘ಹೊಸ ಕಾಯ್ದೆಯನ್ನು ವಾಪಸ್‌ ಪಡೆಯುವಂತೆ ನರೇಗಾ ಕಾರ್ಮಿಕರು ಮತ್ತು ಪಕ್ಷದ ನಾಯಕರು ಸೇರಿದಂತೆ ಎಲ್ಲರನ್ನೂ ಒಟ್ಟುಗೂಡಿಸಿ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಆಂದೋಲನ ರೂಪಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಮಹಾತ್ಮಾಗಾಂಧಿ ಅವರ ಹೆಸರು ಬಳಸಿಕೊಳ್ಳುವ ನೈತಿಕ ಹಕ್ಕು ಅನ್ನು ಬಿಜೆಪಿ ಕಳೆದುಕೊಂಡಿದೆ’ ಎಂದೂ ಅವರು ಹೇಳಿದರು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಶರಣ್‌ಪ್ರಕಾಶ ಪಾಟೀಲ ಇದ್ದರು.

ಹೊಸ ಕಾಯ್ದೆಯಿಂದ ನಿರುದ್ಯೋಗದ ಪ್ರಮಾಣ ಹೆಚ್ಚಳ...

ಕನಿಷ್ಠ ವೇತನದ ರಕ್ಷಣೆ ಇಲ್ಲದೆ ಕಾರ್ಮಿಕರು ಸಂಕಷ್ಟ ಅನುಭವಿಸಲಿದ್ದಾರೆ. ಕಾರ್ಮಿಕರು ಶೋಷಣೆ, ಒತ್ತಡಕ್ಕೆ ಒಳಗಾಗಲಿದ್ದಾರೆ. ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ ಆಗಲಿದೆ. ದಲಿತರು ಮತ್ತು ಆದಿವಾಸಿಗಳ ಮೇಲೆ ಒತ್ತಡ ಸೃಷ್ಟಿ, ಬಲವಂತದ ವಲಸೆ ಜೊತೆಗೆ, ಗ್ರಾಮೀಣ ಬದುಕಿನಲ್ಲಿ ಸಂಕಷ್ಟ ತೀವ್ರಗೊಳ್ಳಲಿದೆ. ಪಂಚಾಯಿತಿಗಳು ಅನುಷ್ಠಾನಗೊಳಿಸುವ ಸಂಸ್ಥೆಗಳಾಗಲಿವೆ. ಸ್ಥಳೀಯ ಕಾಮಗಾರಿಗಳನ್ನು ನಿರ್ಧರಿಸುವ ಅಧಿಕಾರ ಪಂಚಾಯಿತಿಗಳಿಗೆ ಇರುವುದಿಲ್ಲ. ಗ್ರಾಮೀಣ ಆಸ್ತಿ ಮಾಡುವ ಬೇಡಿಕೆ ಇಡುವುದು ಅಸಾಧ್ಯ. ಇವು ಪ್ರಮುಖ ದುಷ್ಪರಿಣಾಮಗಳು’ ಎಂದು ಮುಖ್ಯಮಂತ್ರಿ ಪಟ್ಟಿ ಮಾಡಿದರು.

ಗಾಂಧೀಜಿಯವರನ್ನು ಗೋಡ್ಸೆ ಕೊಂದರು. ಹೊಸ ಯೋಜನೆಯ ಮೂಲಕ ಎರಡನೇ ಬಾರಿಗೆ ಗಾಂಧೀಜಿಯವರನ್ನು ಬಿಜೆಪಿಯವರು ಕೊಂದು ಹಾಕುತ್ತಿದ್ದಾರೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಹೊಸ ಕಾಯ್ದೆ ಹಿಂಪಡೆಯುವಂತೆ ನರೇಗಾ ಕಾರ್ಮಿಕರು ಸೇರಿದಂತೆ ಎಲ್ಲರನ್ನೂ ಒಟ್ಟುಗೂಡಿಸಿ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಆಂದೋಲನ ರೂಪಿಸುತ್ತೇವೆ
ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.