ADVERTISEMENT

ಕಾಂಗ್ರೆಸ್ ನಾಯಕರು ಗೂಂಡಾಗಳಂತೆ ವರ್ತಿಸಿದ್ದು ಅಕ್ಷಮ್ಯ: ಅಶ್ವತ್ಥ ನಾರಾಯಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 11:40 IST
Last Updated 3 ಜನವರಿ 2022, 11:40 IST
ಸಿ.ಎನ್. ಅಶ್ವತ್ಥನಾರಾಯಣ
ಸಿ.ಎನ್. ಅಶ್ವತ್ಥನಾರಾಯಣ   

ರಾಮನಗರ: 'ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸಲಾಗದ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಮುಖ್ಯಮಂತ್ರಿಗಳು ಆಗಮಿಸಿದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಮರೆತು ಗೂಂಡಾಗಳಂತೆ ವರ್ತಿಸಿದ್ದು ಅಕ್ಷಮ್ಯ' ಎಂದು ಸಚಿವ ಸಿ.ಎನ್. ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸೋಮವಾರ ನಡೆದ ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಎದುರೇ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ‌ ಡಿ.ಕೆ.‌ ಸುರೇಶ್ ಹೊಡೆದಾಟಕ್ಕೆ ಮುಂದಾದ‌ ಪ್ರಸಂಗ ನಡೆದಿತ್ತು.

ಈ ಕುರಿತು ಟ್ವೀಟಿಸಿರುವ ಅಶ್ವತ್ಥನಾರಾಯಣ, 'ನಾಡಗೀತೆ ಹಾಡುವಾಗ ಗಲಾಟೆ ಮಾಡುವುದು ಮತ್ತು ನಾಡಪ್ರಭುಗಳ ಪ್ರತಿಮೆ ಅನಾವರಣ ಮಾಡುವಾಗ ದುರ್ವರ್ತನೆ ತೋರುವುದು ಸರಿಯೇ' ಎಂದು ತಿರುಗೇಟು ನೀಡಿದ್ದಾರೆ.

'ರಾಜ್ಯಕ್ಕೆ ಎರಡು ಮುಖ್ಯಮಂತ್ರಿಗಳನ್ನು ಕೊಟ್ಟ ನಮ್ಮ ರಾಮನಗರ ಅಭಿವೃದ್ಧಿ ವಿಚಾರವಾಗಿ ಹೆಸರು ಗಳಿಸಬೇಕೇ ಹೊರತು ಗೂಂಡಾಗಿರಿಯಿಂದಾಗಿ ಅಲ್ಲ. ಅಂತಹ ಅನಾಗರಿಕ ವರ್ತನೆ ತೋರುವುದು ರಾಜ್ಯದಲ್ಲಿ ಕೇವಲ ಒಂದು ಪಕ್ಷದಿಂದ ಮಾತ್ರ ಸಾಧ್ಯ. ನಿಮ್ಮ ಹೋರಾಟ ಅಭಿವೃದ್ಧಿ ವಿಚಾರವಾಗಿರಲಿ, ಅಧಿಕಾರದ ವಿಚಾರವಾಗಿ ಅಲ್ಲ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.