ಮಂಗಳೂರು: ‘ವಿಶ್ವವಿದ್ಯಾಲಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಉನ್ನತ ಶಿಕ್ಷಣವು ಕೇಂದ್ರೀಕೃತವಾಗಿದ್ದು, ಅದನ್ನು ವಿಕೇಂದ್ರೀಕರಣಗೊಳಿಸುವ ಮೂಲಕ ಗುಣಮಟ್ಟ ವೃದ್ಧಿ, ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ, ಪಠ್ಯಕ್ರಮ, ಮೌಲ್ಯಮಾಪನ ಇತ್ಯಾದಿಗಳಲ್ಲಿನ ಸುಧಾರಣೆಗೆ ಬೇಕಾದ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.
‘ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಗಳಿಗೆ ಜ್ಞಾನ ಹಾಗೂ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಇತರ ವಲಯಗಳ ಜೊತೆ ಸಹಭಾಗಿತ್ವ ಹಾಗೂ ಸಹಯೋಗ ನಡೆಸಲು ಪ್ರೋತ್ಸಾಹ ನೀಡಲಾಗುವುದು. ಅಂತರ ಶಿಸ್ತೀಯ ಅಧ್ಯಯನಕ್ಕೆ ಉನ್ನತ ಶಿಕ್ಷಣದಲ್ಲಿ ಅವಕಾಶ ಹೆಚ್ಚಿಸುತ್ತೇವೆ. ಕಲೆ, ವಾಣಿಜ್ಯ, ತಂತ್ರಜ್ಞಾನ, ಕೈಗಾರಿಕೆ... ಹೀಗೆ ಎಲ್ಲವನ್ನೂ ಬಳಸಿಕೊಂಡು ಪಠ್ಯಕ್ರಮದಲ್ಲಿ 360 ಡಿಗ್ರಿ ಸುಧಾರಣೆಯೇ ನಮ್ಮ ಆದ್ಯತೆ’ ಎಂದರು.
‘ಶಿಕ್ಷಣ ಎಂದರೆ ಕೇವಲ ಪದವಿ ಅಲ್ಲ. ಗುಣಮಟ್ಟದ ಪ್ರಸ್ತುತ ಜ್ಞಾನ ಹಾಗೂ ಅದರಿಂದ ಸಮಾಜಕ್ಕೆ ಏನು ಲಾಭ? ಎನ್ನುವುದನ್ನು ನೋಡಬೇಕು. ಅದು ವ್ಯಕ್ತಿಯನ್ನು ಸುಸ್ಥಿರ ಶಕ್ತಿಯಾಗಿ ರೂಪಿಸಬೇಕು. ನಾವು ಕೈಗಾರಿಕಾ ಆಧರಿತ ಸಮಾಜದಿಂದ ಶಿಕ್ಷಣ ಆಧಾರಿತ ಸಮಾಜದತ್ತ ದಾಪುಗಾಲು ಇಡುತ್ತಿದ್ದು, ಅಂತರಶಿಸ್ತೀಯ ಅಧ್ಯಯನ, ಪರಿಕಲ್ಪನಾ ಕಲಿಕೆ ಬಹುಮುಖ್ಯವಾಗಿದೆ. ಶಿಕ್ಷಣದಲ್ಲಿ ಪರಿಪೂರ್ಣತೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಆದ್ಯತೆ ನೀಡಲಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.