ADVERTISEMENT

ಖಾತೆ ಬದಲಾವಣೆ ಇಲ್ಲ, ಬೆಳಗಾವಿ ಉಪಚುನಾವಣೆಗೂ ಸ್ಪರ್ಧಿಸಲ್ಲ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 9:46 IST
Last Updated 19 ಜನವರಿ 2021, 9:46 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌    

ಬೆಂಗಳೂರು: ಬೆಳಗಾವಿ ಲೋಕಸಭೆ ಉಪಚುನಾವಣೆ ಸ್ಪರ್ಧಿಸುವ ಉದ್ದೇಶವೂ ಇಲ್ಲ, ಖಾತೆ ಬದಲಾವಣೆಯೂ ಇಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಹೊಸ ಕೈಗಾರಿಕಾ ನೀತಿಯ ಬಿಡುಗಡೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಪ್ರಮುಖ ನಾಯಕರ ಸಮಿತಿ ಸಭೆಯಲ್ಲಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದಂತೆ ಚರ್ಚೆ ಆಗಿಲ್ಲ. ಚುನಾವಣೆ ಘೋಷಣೆ ಆದ ಬಳಿಕ ಆ ಕುರಿತು ಚರ್ಚೆ ನಡೆಯಲಿದೆ ಎಂದರು.

ಬೆಳಗಾವಿಯಿಂದ ಕಣಕ್ಕಿಳಿಯುವ ಬಗ್ಗೆ ಪಕ್ಷದಲ್ಲಿ ಯಾರೂ ನನಗೆ ಸೂಚಿಸಿಲ್ಲ. ನಾನೂ ಬಯಕೆ ವ್ಯಕ್ತಪಡಿಸಿಲ್ಲ. ನೀವೆ ಇಂತಹದ್ದನ್ನು ಸೃಷ್ಟಿ ಮಾಡಿ ಬಳಿಕ ಪ್ರಶ್ನೆ ಕೇಳುತ್ತೀರಿ ಎಂದು ಹೇಳಿದರು.

ADVERTISEMENT

ಖಾತೆ ಬದಲಾವಣೆ ಆಗಬಹುದೇ ಎಂಬ ಪ್ರಶ್ನೆಗೆ, ಈ ಬಗ್ಗೆ ಮುಖ್ಯಮಂತ್ರಿ ಸೇರಿ ಯಾರೂ ನನ್ನ ಜತೆ ಚರ್ಚೆ ಮಾಡಿಲ್ಲ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಮುಖ್ಯಮಂತ್ರಿಯವರ ಪರಮಾಧಿಕಾರ. ಖಾತೆ ಬದಲಾವಣೆ ಬಗ್ಗೆ ಎಲ್ಲೂ ಚರ್ಚೆಯೇ ಆಗಿಲ್ಲ. ಇದೂ ಕೂಡ ಮಾಧ್ಯಮದವರ ಸೃಷ್ಟಿ ಎಂದು ಶೆಟ್ಟರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.