ಹಾವೇರಿ: ‘ಮೂರು ಬಾರಿ ಶಾಸಕನಾಗಿದ್ದೇನೆ ಮತ್ತು ಅನುಭವಿ ರಾಜಕಾರಣಿಯಾಗಿದ್ದೇನೆ. ನನಗೂ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿದರೆ, ಉತ್ತಮ ಆಡಳಿತ ನೀಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ’ ಎಂದು ಶಾಸಕ ನೆಹರೂ ಓಲೇಕಾರ ತಿಳಿಸಿದರು.
ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿ, ‘ಎಲ್ಲರೂ ಸಚಿವ ಸ್ಥಾನ ಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇದರಿಂದ ನಮ್ಮ ನಾಯಕರಿಗೆ ಸಮಸ್ಯೆಯಾಗಿದೆ. ಆದರೆ, ತುಲಾನಾತ್ಮಕವಾಗಿ ಆಲೋಚನೆ ಮಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಎಲ್ಲ ಸಮುದಾಯಕ್ಕೂ ಆದ್ಯತೆ ನೀಡಿದಂತಾಗುತ್ತದೆ. ಮುಖ್ಯಮಂತ್ರಿ ಅವರು ನನಗೂ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.
‘ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು 17 ಶಾಸಕರು ತ್ಯಾಗ ಮಾಡಿದ್ದಾರೆ. ಅವರಿಗೆ ಸ್ಥಾನ ಕೊಟ್ಟರೆ ನಮ್ಮ ತಕರಾರಿಲ್ಲ. ಸೋತಿರುವವರಿಗೆ ಸಚಿವ ಸ್ಥಾನ ಅಥವಾ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಬಹುದು. ನಮ್ಮಲ್ಲಿ ತ್ಯಾಗ ಮಾಡುವ ಮನೋಭಾವದವರು ಇದ್ದಾರೆ. ಸಚಿವ ಸ್ಥಾನ ಇಲ್ಲದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂಬ ವ್ಯಕ್ತಿತ್ವದವರೂ ಇದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.