ADVERTISEMENT

ಶಾಸಕ ಕುಮಠಳ್ಳಿ ಕಾಣೆ– ಪೊಲೀಸ್‌ ಠಾಣೆಗೆ ದೂರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 12:51 IST
Last Updated 7 ಫೆಬ್ರುವರಿ 2019, 12:51 IST

ಅಥಣಿ: ‘ಶಾಸಕ ಮಹೇಶ ಕುಮಠಳ್ಳಿ ಬಹಳ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರನ್ನು ಅಪಹರಿಸಿ, ಗೃಹ ಬಂಧನದಲ್ಲಿಟ್ಟಿರುವ ಸಾಧ್ಯತೆ ಇದೆ. ಕೂಡಲೇ ಅವರನ್ನು ಹುಡುಕಿಕೊಡಿ’ ಎಂದು ಅಥಣಿ ಯೂಥ್‌ ಕಾಂಗ್ರೆಸ್‌ ಕಾರ್ಯದರ್ಶಿ ಪ್ರಮೋದ ಹಿರೇಮನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇಲ್ಲಿನ ಪೊಲೀಸ್‌ ಠಾಣೆಗೆ ಗುರುವಾರ ದೂರು ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಳೆದ 50 ದಿನಗಳಿಂದ ನಮ್ಮ ಕೈಗೆ ಶಾಸಕರು ಸಿಗುತ್ತಿಲ್ಲ. ಕಳೆದ ತಿಂಗಳು 26ರಂದು ಕೆಲಹೊತ್ತು ಕಾಣಿಸಿಕೊಂಡಿದ್ದರು. ನಂತರ ಪುನಃ ಕಣ್ಮರೆಯಾದರು. ತಮ್ಮ ದೂರು ದುಮ್ಮಾನಗಳನ್ನು ಹೇಳಿಕೊಳ್ಳಲು ಕ್ಷೇತ್ರದ ಜನರಿಗೆ ಶಾಸಕರು ಸಿಗದಂತಹ ಪರಿಸ್ಥಿತಿ ಇದೆ’ ಎಂದರು.

‘ಯಾವುದೇ ಸಭೆ, ಸಮಾರಂಭಗಳನ್ನು ನಡೆಸಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ. ಶಾಸಕಾಂಗ ಪಕ್ಷದ ಸಭೆಗೂ ಹಾಜರಾಗಿಲ್ಲ. ಎರಡು ಸಲ ಪಕ್ಷದ ಮುಖಂಡರು ನೋಟಿಸ್‌ ನೀಡಿದ್ದರೂ ಉತ್ತರಿಸಿಲ್ಲ. ಅವರನ್ನು ಅಪಹರಿಸಿರುವ ಶಂಕೆ ನಮಗಿದೆ. ತಕ್ಷಣ ಅವರನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.