ಮೈಸೂರು: ‘ಕಾಂಗ್ರೆಸ್ ಸಹ ಹಿಂದೂ ಸೆಲ್ ಆರಂಭಿಸಬೇಕಿದೆ’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಭಾನುವಾರ ಇಲ್ಲಿ ಹೇಳಿದರು.
ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಮೈಸೂರಿನಿಂದಲೇ ಈ ಚಿಂತನೆ ಆರಂಭವಾಗಲಿ. ಇಂದು ಪ್ರಸ್ತಾಪವಾದ ವಿಷಯವನ್ನು ನಗರ ಅಧ್ಯಕ್ಷರು ಕೆಪಿಸಿಸಿ, ಎಐಸಿಸಿಗೂ ನಿರ್ಣಯದ ಮೂಲಕ ಕಳುಹಿಸಿಕೊಡಬೇಕು’ ಎಂದು ಸಲಹೆ ನೀಡಿದರು.
‘ಸಾಕಷ್ಟು ಬದಲಾವಣೆ ಆಗಬೇಕಿದೆ. ಯುವ ಪೀಳಿಗೆಗಾಗಿ ಪಕ್ಷ ಕಟ್ಟೋಣ. ಎಲ್ಲ ವರ್ಗದವರನ್ನು ಆಕರ್ಷಿಸೋಣ. ಯುವಕರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದವರಿಗೆ ಅವಕಾಶ, ಸೌಲಭ್ಯ ಒದಗಿಸಿದ್ದು ಕಾಂಗ್ರೆಸ್. ರಾಮ ಮಂದಿರದ ವಿಷಯದಲ್ಲೂ ಸಾಕಷ್ಟು ಕೊಡುಗೆ ಕೊಟ್ಟಿದೆ. ಇದೀಗ ಎಲ್ಲರೂ ನಮ್ಮನ್ನು ಕೈ ಬಿಟ್ಟಿದ್ದಾರೆ. ಈ ಸೋಲಿಗೆ ನಾವೇ ಕಾರಣ. ಈ ಬಗ್ಗೆ ಚರ್ಚೆ ನಡೆಯಲಿ’ ಎಂದು ಹೇಳಿದರು.
‘12 ವರ್ಷದ ಹಿಂದೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಬ್ಬರು ಕೆಪಿಸಿಸಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಈ ಬಗ್ಗೆ ಹೊಸ ಚಿಂತನೆ ನಡೆಸಬೇಕಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.