ಬೆಂಗಳೂರು: ಜೆಎಸ್ಡಬ್ಲ್ಯೂ ಸ್ಟೀಲ್ ಲಿಮಿಟೆಡ್ನಿಂದ ₹1,172.79 ಕೋಟಿ ಹಾನಿ ಮರುಪಾವತಿ ಪಡೆಯಲು ಸರ್ಕಾರಿ ಸ್ವಾಮ್ಯದ ಮೈಸೂರ್ ಮಿನರಲ್ ಲಿಮಿಟೆಡ್ಗೆ (ಎಂಎಂಎಲ್) ಅನುಮತಿ ನೀಡಿದ್ದ ಸಿಟಿ ಸಿವಿಲ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಎರಡೂ ಕಡೆಯ ಇತರ ಎಲ್ಲಾ ವಿವಾದಗಳನ್ನು ಒಂದು ವರ್ಷದೊಳಗೆ ಇತ್ಯರ್ಥಪಡಿಸುವಂತೆ ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಕಬ್ಬಿಣದ ಅದಿರಿನ ಪೂರೈಕೆಗಾಗಿ ಪಾವತಿಸಿದ್ದ ಹೆಚ್ಚುವರಿ ಪ್ರೀಮಿಯಂ ಮೊತ್ತವಾದ ₹272 ಕೋಟಿ ಮರುಪಾವತಿಸುವಂತೆ ಕೋರಿ 2012ರಲ್ಲಿ ಜೆಎಸ್ಡಬ್ಲ್ಯೂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. 2013ರಲ್ಲಿ ಲಿಖಿತ ಹೇಳಿಕೆ ಸಲ್ಲಿಸಿದ್ದರೂ, 2016ರಲ್ಲಿ ತಿದ್ದುಪಡಿಯ ಮೂಲಕ ಮತ್ತೊಂದು ಹೇಳಿಕೆ ಸಲ್ಲಿಸಿ ₹1,171 ಕೋಟಿಯನ್ನು ಜೆಎಸ್ಡಬ್ಲ್ಯೂ ಪಾವತಿಸಬೇಕು ಎಂದು 2020ರ ನವೆಂಬರ್ 10ರಂದು ಎಂಎಂಎಲ್ ಕೋರಿತ್ತು. ಈ ಅರ್ಜಿಯನ್ನು ಸಿವಿಲ್ ನ್ಯಾಯಾಲಯ ಪುರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಜೆಎಸ್ಡಬ್ಲ್ಯೂ ಹೈಕೋರ್ಟ್ ಮೆಟ್ಟಿಲೇರಿತ್ತು. ಮರುಪಾವತಿ ಹಕ್ಕುಗಳಿಗೆ ಕಾಯ್ದೆಯಲ್ಲಿ ಸಮಯದ ನಿರ್ಬಂಧವಿದೆ ಎಂದು ಪ್ರತಿಪಾದಿಸಿತ್ತು. ಸಿವಿಲ್ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ವಜಾಗೊಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.