ADVERTISEMENT

ಬಿಜೆಪಿಗರ ಆಸ್ತಿ ಹರಾಜು ಹಾಕಿ ಪರಿಹಾರ ಕೊಡಿ

ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮೇ 2022, 17:07 IST
Last Updated 18 ಮೇ 2022, 17:07 IST
ಮೋಹನ್‌ ದಾಸರಿ
ಮೋಹನ್‌ ದಾಸರಿ   

ಬೆಂಗಳೂರು: ‘ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ, ಆ ಹಣದಿಂದಮಳೆಹಾನಿ ಸಂತ್ರಸ್ತರಿಗೆ ಪರಿಹಾರ ಕೊಡಬೇಕು’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ)ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಹೇಳಿದರು.

ಮಾಧ್ಯಮಗಳ ಜತೆ ಬುಧವಾರ ಮಾತನಾಡಿದ ಅವರು,‘ಬೆಂಗಳೂರಿನ ಜನ ಮಳೆಗೆ ತತ್ತರಿಸಿ, ಇಬ್ಬರು ಪ್ರಾಣ ಕಳೆದುಕೊಂಡಿರುವುದಕ್ಕೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿಯೇ ಕಾರಣ’ ಎಂದು ದೂರಿದರು.

‘ಬಿಜೆಪಿ ಸರ್ಕಾರ ರಾಜಕಾಲುವೆ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿರುವ ಪರಿಣಾಮ, ಜನರು ರಸ್ತೆಗಳಲ್ಲಿ ಓಡಾಡಲು ದೋಣಿ ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಳೆಗಾಲ ಬಂದರೆ ಜೀವ ಭಯದಲ್ಲೇ ಜನ ದಿನ ಕಳೆಯುತ್ತಿದ್ದು,ಮಂಗಳವಾರ ರಾತ್ರಿ ಸುರಿದ ಮಳೆಗೆ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಈ ಅನಾಹುತಗಳಿಗೆ ಕಾರಣವಾಗಿರುವ ರಾಜಕಾಲುವೆ ಒತ್ತುವರಿಗೆ ಮುಕ್ತಿಯೇ ಇಲ್ಲವಾಗಿದೆ.ನಗರದ ಬಹುತೇಕ ಆಸ್ಪತ್ರೆಗಳು, ವಾಣಿಜ್ಯ ಕಟ್ಟಡಗಳಿಗಾಗಿ ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಹಲವು ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಇವುಗಳ ತೆರವು ಕಾರ್ಯಾಚರಣೆ ನಡೆಯುತ್ತಿಲ್ಲ’ ಎಂದರು.

‘ರಾಜಕಾಲುವೆ ಒತ್ತುವರಿ ಜಾಗದಲ್ಲಿರುವ 714 ಕಟ್ಟಡಗಳ ತೆರವಿಗೆಪಾಲಿಕೆ ಪಟ್ಟಿ ಸಿದ್ಧಪಡಿಸಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವು ಮಾಡಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.