ADVERTISEMENT

ಧಾರಾಕಾರ ಮಳೆ: ಕೊಚ್ಚಿಹೋದ ಶೆಟ್ಟಿಕೇರಿ ರಸ್ತೆ, ಸವದತ್ತಿಯಲ್ಲಿ 27 ಮನೆಗೆ ಹಾನಿ

ಬೆಣ್ಣೆಹಳ್ಳಕ್ಕೆ ಬೈಕ್‌ ಬಿದ್ದು ಸವಾರ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 19:47 IST
Last Updated 2 ಸೆಪ್ಟೆಂಬರ್ 2022, 19:47 IST
ಲಕ್ಷ್ಮೇಶ್ವರ ಸಮೀಪದ ಶೆಟ್ಟಕೇರಿ ಗ್ರಾಮದ ಕೆರೆಗೆ ಕೋಡಿ ಬಿದ್ದಿದ್ದು, ನೀರಿನ ರಭಸಕ್ಕೆ ಶುಕ್ರವಾರ ರಸ್ತೆ ಕೊಚ್ಚಿ ಹೋಗಿದೆ
ಲಕ್ಷ್ಮೇಶ್ವರ ಸಮೀಪದ ಶೆಟ್ಟಕೇರಿ ಗ್ರಾಮದ ಕೆರೆಗೆ ಕೋಡಿ ಬಿದ್ದಿದ್ದು, ನೀರಿನ ರಭಸಕ್ಕೆ ಶುಕ್ರವಾರ ರಸ್ತೆ ಕೊಚ್ಚಿ ಹೋಗಿದೆ   

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ 27 ಮನೆಗಳಿಗೆ ಹಾನಿಯಾಗಿದ್ದು, ಎರಡು ಮನೆಗಳು ಭಾಗಶಃ ಕುಸಿದಿವೆ. ಜೀವಾಪುರದಲ್ಲಿ ಮನೆಯ ಗೋಡೆ ಕುಸಿದು ಹಸು ಮೃತಪಟ್ಟಿದೆ.

ನವಲಗುಂದ ತಾಲ್ಲೂಕಿನ ತಡಹಾಳ ಗ್ರಾಮದ ಬೆಣ್ಣೆಹಳ್ಳದ ಸೇತುವೆ ಮೇಲಿಂದ ಬೈಕ್ ಆಯತಪ್ಪಿ ಹಳ್ಳಕ್ಕೆ ಬಿದ್ದು ಸವಾರರೊಬ್ಬರು ನಾಪತ್ತೆಯಾಗಿದ್ದಾರೆ. ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಸದಾನಂದ ಮಾದರ, ಮತ್ತು ಶರಣಯ್ಯ ಹಿರೇಮಠ ಸೇತುವೆ ಮೇಲೆ ಸಾಗುವಾಗ ಆಯತಪ್ಪಿ ಬಿದ್ದಿದ್ದಾರೆ. ಸದಾನಂದ ಈಜು ಬಾರದೇ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಶರಣಯ್ಯ ಈಜಿ ದಡ ಸೇರಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಶೆಟ್ಟಿಕೇರಿಯ ದೊಡ್ಡ ಕೆರೆಗೆ ಕೋಡಿ ಬಿದ್ದಿದ್ದು, ಶುಕ್ರವಾರ ನಸುಕಿನ ಜಾವ ಶೆಟ್ಟಿಕೇರಿ-ಶಿರಹಟ್ಟಿ ನಡುವಿನ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. ನೀರು ಸಮೀಪದ ಹೊಲಗಳಿಗೆ ನುಗ್ಗಿದೆ. ಇಟ್ಟಿಗೇರಿ ಕೆರೆಯ ಹಿನ್ನೀರಿನಿಂದ ಮನೆಗಳು ಜಲಾವೃತಗೊಂಡಿವೆ. ಸಮೀಪದ ಬಾಬಾ ಮಂದಿರಕ್ಕೂ ನೀರು ನುಗ್ಗಿದೆ.

ADVERTISEMENT

ಇದೇ ತಾಲ್ಲೂಕಿನ ಬಟ್ಟೂರಿನ ದೊಡ್ಡ ಹಳ್ಳ ಉಕ್ಕಿ ಹರಿದು ರಸ್ತೆ ಹಾಳಾಗಿದೆ. ಅಡರಕಟ್ಟಿ- ಪುಟಗಾವ್‍ಬಡ್ನಿ ರಸ್ತೆಯಲ್ಲಿ ಶುಕ್ರವಾರ ಕೋಳಿಗಳನ್ನು ಸಾಗಿಸುತ್ತಿದ್ದ ವಾಹನ ರಸ್ತೆಪಕ್ಕ ವಾಲಿದ್ದರಿಂದ ಕೋಳಿ ತುಂಬಿದ್ದ ಟ್ರೇಗಳು ಚೆಲ್ಲಾಪಿಲ್ಲಿಯಾದವು. ನರಗುಂದ ತಾಲ್ಲೂಕಿನಲ್ಲಿ ಮಳೆ ಕಡಿಮೆಯಾದರೂ ಯಾವಗಲ್ ಬಳಿ ಬೆಣ್ಣೆಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.