ದಾವಣಗೆರೆ: ‘ಮೂಲ ಬಿಜೆಪಿಗರು, ವಲಸೆ ಬಂದವರು ಎಂಬ ಭೇದ ಪಕ್ಷದಲ್ಲಿ ಇಲ್ಲ. ಹಾಗೆ ನೋಡಿದರೆ ಬಹುತೇಕರು ವಲಸೆ ಬಂದವರೇ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನಾನು ಕೂಡ ಕಾಂಗ್ರೆಸ್ನಲ್ಲಿದ್ದೆ. ಒಮ್ಮೆ ಬಿಜೆಪಿ ಸೇರಿದ ಮೇಲೆ ಎಲ್ಲರೂ ಒಂದೇ. ವಲಸಿಗ, ಮೂಲ ಎಂದೆಲ್ಲ ಹೇಳಿಕೊಂಡಿದ್ದರೆ ಪಕ್ಷ ಬೆಳೆಯುವುದಿಲ್ಲ. ಸಚಿವ ಸ್ಥಾನ ಕೇಳುವ ಹಕ್ಕು ಎಲ್ಲಾ ಶಾಸಕರಿಗೂ ಇದೆ. ಸಂಪುಟ ವಿಸ್ತರಣೆ ಆದ ಮೇಲೆ ಎಲ್ಲರೂ ಸುಮ್ಮನಾಗುತ್ತಾರೆ’ ಎಂದು ಅವರು ಹೇಳಿದರು.
‘ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ಬಿಜೆಪಿ ಶಾಸಕರಿದ್ದಾರೆ. ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ಉಪ ಚುನಾವಣೆಯಲ್ಲಿ ಗೆದ್ದು ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಿದ ಬಳಿಕ ಯಾವ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ನೋಡಿ ಸರಿಯಾದ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದು ಸಿದ್ದೇಶ್ವರ ತಿಳಿಸಿದರು.
‘ಕೈಗಾರಿಕಾ ಕಾರಿಡಾರ್ ಮಾಡಲು ಮನವಿ ಮಾಡಿದ್ದೇನೆ. ಈಗ ಸ್ಥಿರ ಸರ್ಕಾರ ಬಂದಿದೆ. ಇನ್ನು ಮೂರೂವರೆ ವರ್ಷಗಳ ಒಳಗೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮೂಲಕ ಈ ಕೆಲಸ ಮಾಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.