ಬೆಂಗಳೂರು: 'ಆತ್ಮತೃಪ್ತಿಯಿಂದಲೇ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಕೈಗಾರಿಕೆಗಳ ಸ್ಥಿತಿಗತಿ ಕುರಿತು ಚರ್ಚಿಸಿದ್ದೇವೆ. ನನಗೆ ಯಾವುದೇ ಅಸಮಾಧಾನ ಇಲ್ಲ' ಎಂದು ಸಣ್ಣ ಕೈಗಾರಿಕೆಗಳ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಸಚಿವ ಸ್ಥಾನ ಬದಲಾವಣೆಗೆ ಪಟ್ಟು ಹಿಡಿದಿರುವ ನಡುವೆಯೇ ಇಲಾಖೆಯ ಅಧಿಕಾರಿಗಳ ಸಭೆ ಬುಧವಾರ ನಡೆಸಿದ ಅವರು, 'ಮುಖ್ಯಮಂತ್ರಿ ಬಳಿ ನನ್ನ ಅಭಿಪ್ರಾಯ ಹೇಳಿದ್ದೇನೆ. ಅವರು ಕೆಲಸ ಮಾಡುತ್ತಿರಿ ಎಂದಿದ್ದಾರೆ. ಬದಲಾವಣೆ ಬಗ್ಗೆ ಕೇಳಿದ್ದೇನೆ' ಎಂದರು.
'ಬಿಜೆಪಿಯಲ್ಲೇ ಮುಂದುವರಿಯುತ್ತೇನೆ. ರಾಜಕೀಯ ಸನ್ಯಾಸತ್ವ ತೆಗೆದುಕೊಂಡಿಲ್ಲ. ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು ಇದ್ದಂತೆ. ಯಾವುದೇ ಅಧಿಕಾರ, ಅಂತಸ್ತಿಗೆ ಆಸೆ ಪಟ್ಟವನಲ್ಲ. ಅಧಿಕಾರಕ್ಕಾಗಿ ಬಿಜೆಪಿಗೆ ಬಂದವನಲ್ಲ. ಈಗಾಗಲೇ ಎಂತೆಲ್ಲ ಅಧಿಕಾರ, ಅಂತಸ್ತು ನನ್ನ ಬಳಿ ಇದೆ. ಎಲ್ಲೇ ಇದ್ದರೂ ಪ್ರಾಮಾಣಿಕವಾಗಿ ಜನ ಸೇವೆ ಮಾಡುವುದಷ್ಟೇ ನನ್ನ ಉದ್ದೇಶ' ಎಂದರು.
"ನಾನು ಸಿಎಂ ಬಳಿ ಮಾತನಾಡಿರುವುದನ್ನು ಇಲ್ಲಿ ಹೇಳುವುದಿಲ್ಲ. ನಾನು ಯಾವ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಲ್ಲ. ಹಿಂದೆಯೂ ಮಾಡಿಲ್ಲ. ಈಗಲೂ ಭೇಟಿ ಮಾಡುವುದಿಲ್ಲ. ಆನಂದ್ ಸಿಂಗ್ ರಾಜೀನಾಮೆ ಕೊಡುವುದು, ಬಿಡುವುದು ಅವರಿಗೆ ಸೇರಿದ್ದು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಬಹುದು' ಎಂದರು.
ಖಾತೆ ಬದಲಾವಣೆಗಾಗಿ ಎಂಟಿಬಿ ನಾಗರಾಜ್ ಅವರು ಬಹಿರಂಗವಾಗಿ ಒತ್ತಾಯಿಸಿದ್ದರು. ಬೊಮ್ಮಾಯಿ ಅವರನ್ನೂ ಭೇಟಿ ಮಾಡಿ ಮಾತನಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.