ADVERTISEMENT

ಪ್ರವಾಹ ಪರಿಹಾರ ಪ್ರಶ್ನೆಗೆ ಮುರಳೀಧರರಾವ್‌ ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 18:49 IST
Last Updated 23 ಸೆಪ್ಟೆಂಬರ್ 2019, 18:49 IST
ಮುರಳೀಧರ ರಾವ್‌
ಮುರಳೀಧರ ರಾವ್‌   

ಕಲಬುರ್ಗಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಪ್ರವಾಹ ಪರಿಹಾರ ನೀಡದ ಬಗ್ಗೆಎದುರಾದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಮುರಳೀಧರ ರಾವ್‌, ‘ನನ್ನ ಮುಂದೆ ಡಿಕ್ಟೇಟರ್‌ನಂತೆ ಮಾತನಾಡಬೇಡಿ’ ಎಂದುಪತ್ರಕರ್ತರ ಮೇಲೆಯೇ ಹರಿಹಾಯ್ದರು.

ಸೋಮವಾರ ಇಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ, ‘370ನೇ ವಿಧಿ ಹಿಂತೆಗೆದ ಬಗ್ಗೆ ಕೇಂದ್ರ ಸರ್ಕಾರವೇ ದೇಶದಾದ್ಯಂತ ಪ್ರಚಾರ ಹಮ್ಮಿಕೊಂಡಿದೆ. ಆದರೆ, ರಾಜ್ಯದಲ್ಲಿ ಉಂಟಾದ ಪ್ರವಾಹ ಸಂತ್ರಸ್ತರನ್ನು ಕಣ್ಣೆತ್ತಿಯೂ ನೋಡಿಲ್ಲ. ಈವರೆಗೆ ಬಿಡಿಗಾಸನ್ನೂ ನೀಡಿಲ್ಲ. ಪ್ರಚಾರಕ್ಕೆ ಬರುವ ನೀವು, ಪ್ರವಾಹ ಪರಿಸ್ಥಿತಿಯನ್ನು ಕೇಂದ್ರಕ್ಕೆ ಏಕೆ ಮನವರಿಕೆ ಮಾಡಬಾರದು’ ಎಂದು ಪತ್ರಕರ್ತರು ಪ್ರಶ್ನಿಸಿದರು.

ಇದರಿಂದ ಸಿಡಿಮಿಡಿಗೊಂಡ ಮುರಳೀಧರ ರಾವ್‌,‘ಸಿದ್ಧ ಪ್ರಶ್ನೆಗಳನ್ನು ಕೇಳಬೇಡಿ. ಅದಕ್ಕೆ ಉತ್ತರಿಸುವ ಅವಶ್ಯಕತೆ ನನಗಿಲ್ಲ. ನಾನು ಪತ್ರಿಕಾಗೋಷ್ಠಿಯಲ್ಲಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಲ್ಲ.ನಾನಿಲ್ಲಿ ಚರ್ಚಾಸ್ಪರ್ಧೆಗೆ ಬಂದಿಲ್ಲ’ ಎಂದರು.

ADVERTISEMENT

‘ಪ್ರವಾಹ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡುತ್ತೇವೆ. ಈ ಹಿಂದೆ ಕೂಡ ಕೇಂದ್ರವು ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಿದೆ. ಈ ಬಾರಿಯೂ ಮೊದಲ ಪ್ರಾಶಸ್ತ್ಯ ನೀಡುತ್ತೇವೆ. ಈ ಪ್ರಶ್ನೆ ಇಲ್ಲಿಗೇ ಮುಗೀತು, ಬೇರೆ ಪ್ರಶ್ನೆ ಕೇಳಿ’ ಎಂದು ಕಡ್ಡಿ ಮುರಿದಂತೆ ಹೇಳಿದರು.

ಎಲ್ಲ ಕ್ಷೇತ್ರಗಳಲ್ಲಿ ಗೆಲುವು:‘ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇನ್ನೂ ಸಭೆ ನಡೆಸಿಲ್ಲ. ಆದರೆ, ಸದ್ಯ ಪಕ್ಷದ ವರ್ಚಿಸ್ಸಿನ ಮೇಲೆಯೇ ನಾವು ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಇನ್ನು ಮುಂದೆ ಬಿಜೆಪಿಗೆ ಕರ್ನಾಟಕವೇ ದಕ್ಷಿಣ ಭಾರತದ ಶಕ್ತಿಕೇಂದ್ರ ಆಗಲಿದೆ. ಇಲ್ಲಿನ ಆಡಳಿತ ಉಳಿದೆಲ್ಲ ರಾಜ್ಯಗಳಿಗೂ ಮಾದರಿಯಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.