ಬೆಂಗಳೂರು: ಗಣಿ ಸಚಿವ ಮುರುಗೇಶ ನಿರಾಣಿ ಅವರಿಗೆ ಪಕ್ಷದ ವರಿಷ್ಠರು ತಕ್ಷಣವೇ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದು, ಮಂಗಳವಾರವೇ ಅವರು ದೆಹಲಿಗೆ ತೆರಳಲಿದ್ದಾರೆ.
ಗೃಹ ಸಚಿವ ಅಮಿತ್ ಶಾ ಸೂಚನೆ ಬಂದಿದ್ದರಿಂದಾಗಿ, ಪೂರ್ವ ನಿಗದಿಯಾಗಿದ್ದ ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಗಳ ಪ್ರವಾಸವನ್ನು ಹಠಾತ್ ರದ್ದುಪಡಿಸಿದ ನಿರಾಣಿ ಸೋಮವಾರ ರಾತ್ರಿ ಚಿತ್ರದುರ್ಗದಿಂದ ಬೆಂಗಳೂರಿಗೆ ವಾಪಸ್ ಆದರು. ಮಂಗಳವಾರ ಬೆಳಿಗ್ಗೆ 5.30 ಕ್ಕೆ ಅವರು ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಯಾವ ಕಾರಣಕ್ಕಾಗಿ ಬರಲು ಹೇಳಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿರುವ ಬೆನ್ನಲ್ಲೇ ಈ ವಿದ್ಯಮಾನ ಕುತೂಹಲ ಕೆರಳಿಸಿದೆ.
ಅಮಿತ್ ಶಾ ಅವರ ಜತೆ ನಿರಾಣಿ ಅವರ ಸಂಬಂಧ ಉತ್ತಮವಾಗಿದ್ದು, ಹಲವು ಬಾರಿ ಶಾ ಅವರನ್ನು ಭೇಟಿ ಮಾಡಿದ್ದರು. ಆದರೆ, ಅದು ರಾಜಕೀಯ ಭೇಟಿ ಅಲ್ಲ ಎಂದು ನಿರಾಣಿ ಹೇಳಿದ್ದಾರೆ. ಈ ಮಧ್ಯೆ ಅವರ ಹೆಸರೂ ಮುಖ್ಯಮಂತ್ರಿ ಹುದ್ದೆಗೂ ಕೇಳಿ ಬಂದಿತ್ತು. ಆದರೆ, ಅವರು ಅದನ್ನು ನಿರಾಕರಿಸಿದ್ದರು.
ಈ ಬಾರಿಯ ಭೇಟಿಯಲ್ಲಿ ರಾಜ್ಯದ ರಾಜಕೀಯವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇರಬಹುದು ಎಂದು ಮೂಲಗಳು ಹೇಳಿವೆ. ಸದ್ಯವೇ ಕೇಂದ್ರ ಸಚಿವ ಸಂಪುಟ ವಿಸ್ತರಣೆಯೂ ಆಗಲಿದ್ದು, ರಾಜ್ಯದ ಒಬ್ಬರು ಅಥವಾ ಇಬ್ಬರು ಸಂಸದರಿಗೆ ಸಚಿವ ಸ್ಥಾನ ಸಿಗಬಹುದು. ಬಿ.ವೈ.ರಾಘವೇಂದ್ರ, ಪ್ರತಾಪಸಿಂಹ ಅವರ ಹೆಸರೂ ಚಾಲ್ತಿಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.