ಬೆಂಗಳೂರು: ಶೀಘ್ರದಲ್ಲಿ ಉಪಚುನಾವಣೆ ನಡೆಯಲಿರುವ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಜೆಡಿಎಸ್ ನಿರ್ಧರಿಸಿದೆ.
ದಾಸರಹಳ್ಳಿಯಲ್ಲಿ ಭಾನುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರ
ಸ್ವಾಮಿ, ‘ಸದ್ಯದ ಪರಿಸ್ಥಿತಿ ನೋಡಿದರೆ ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ವ್ಯರ್ಥ. ಆದರೂ ಆ ಎರಡೂ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರ ಜತೆ ಚರ್ಚಿಸುತ್ತೇನೆ’ ಎಂದರು.
‘ಮುಂದಿನ ಸಾರ್ವತ್ರಿಕ ಚುನಾವಣೆ ನಮಗೆ ಮುಖ್ಯ. ರಾಜ್ಯದಲ್ಲಿ ಜೆಡಿಎಸ್ ಇನ್ನೂ ಬದುಕಿದೆ. ಪಕ್ಷ ಸಂಘಟನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದರು.
‘ನಿಗಮ, ಪ್ರಾಧಿಕಾರ ರಚನೆ ವಿಷಯದಲ್ಲಿ ಸರ್ಕಾರದಿಂದ ಗೊಂದಲ ಸೃಷ್ಟಿಯಾಗಿದೆ. ಹಾಗೆ ನೋಡಿದರೆ ಮೊದಲು ಒಕ್ಕಲಿಗ ಸಮುದಾಯಕ್ಕೆ ಪ್ರಾಧಿಕಾರ ಮಾಡಬೇಕಿತ್ತು. ಒಕ್ಕಲಿಗ ಸಮುದಾಯದ ತ್ಯಾಗ, ಸೇವೆ ದೊಡ್ಡದು. ಬೆಂಗಳೂರಿಗೆ ಒಕ್ಕಲಿಗರ ಕೊಡುಗೆ ದೊಡ್ಡದಿದೆ. ಆದರೆ, ಮತಕ್ಕಾಗಿ ಪ್ರಾಧಿಕಾರ ರಚನೆ ಸರಿಯಲ್ಲ. ನಿಗಮ, ಪ್ರಾಧಿಕಾರಗಳಿಂದ ಪ್ರಯೋಜನ ಇಲ್ಲ. ನಮ್ಮ ಕಾಲದಲ್ಲೂ ಬ್ರಾಹ್ಮಣ, ಆರ್ಯ ವೈಶ್ಯ ನಿಗಮ ಮಾಡಿದ್ದೇವೆ’ ಎಂದರು.
‘ಮರಾಠ ನಿಗಮಕ್ಕೆ ನನ್ನ ವಿರೋಧ ಇಲ್ಲ. ಆದರೆ, ಪ್ರಾಧಿಕಾರ ರಚನೆಯ ಉದ್ದೇಶದ ಬಗ್ಗೆ ಕನ್ನಡಪರ ಸಂಘಟನೆಗಳಿಗೆ ಸರ್ಕಾರ ಮನವರಿಕೆ ಮಾಡಿಕೊಡಬೇಕಿತ್ತು. ಈಗ ಭಾಷೆ, ಭಾಷೆಗಳ ನಡುವೆ ಸಂಘರ್ಷ ಶುರುವಾಗಿದೆ. ಸರ್ಕಾರ ಕನ್ನಡಪರ ಸಂಘಟನೆಗಳನ್ನು ದಬ್ಬಾಳಿಕೆಯಿಂದ ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದೆ’ ಎಂದರು.
‘ನನ್ನ ಅವಧಿಯಲ್ಲಿ ಹಲವು ಯೋಜನೆಗಳನ್ನು ನೀಡಿದೆ. ಆದರೆ ಚುನಾವಣೆಯಲ್ಲಿ ಜನರು ಮಾತ್ರ ನಮ್ಮ ಪಕ್ಷಕ್ಕೆ ಮತ ಹಾಕಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.