ಹೊನ್ನಾಳಿ: ಮುಸ್ಲಿಂ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಮುಸ್ಲಿಮರು ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಹೊನ್ನಾಳಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ, ‘ಮಸೀದಿಗಳಲ್ಲಿ ಪ್ರಾರ್ಥನೆ ಹೆಸರಿನಲ್ಲಿ ಮದ್ದುಗುಂಡು, ಬಂದೂಕುಗಳನ್ನು ಸಂಗ್ರಹಿಸಿ ಫತ್ವಾ ಹೊರಡಿಸುವ ಮೌಲಾಗಳೇ ನಿಮಗೆ ಎಚ್ಚರಿಕೆ. ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳಲ್ಲಿ ಇನ್ನು ಮುಂದೆ ಕೇಸರಿ ರಾಜಕಾರಣ ಮಾಡಲಾಗುವುದು’ ಎಂದು ಹೇಳಿಕೆ ನೀಡಿದ್ದ ರೇಣುಕಾಚಾರ್ಯ ವಿರುದ್ಧ ಮುಸ್ಲಿಂ ಸಮುದಾಯದವರು ಸಿಡಿದೆದ್ದರು.
ಅಂಗಡಿ ಬಂದ್ ಮಾಡಿ ಮಧ್ಯಾಹ್ನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು, ತಾಲ್ಲೂಕು ಕಚೇರಿ ಎದುರು ಬಂದು ಸೇರಿದರು. ತಮ್ಮ ಕ್ಷೇತ್ರದ ಶಾಸಕರೂ ಆಗಿರುವ ರೇಣುಕಾಚಾರ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿಗಳಾದ ಎಂ.ಕೆ. ಗಂಗಲ್, ಪ್ರಶಾಂತ ಮುನ್ನೋಳಿ ಹಾಗೂ ತಹಶೀಲ್ದಾರ್ ತುಷಾರ್ ಹೊಸೂರ್ಗೆ ಮನವಿ ಸಲ್ಲಿಸಿದರು.
ಜಾಮಿಯಾ ಮಸೀದಿಯ ಧರ್ಮಗುರು ಸೈಯದ್ ಇಸ್ಲಾಯಿಲ್ ರಜಾ, ಇದುವರೆಗೂ ತಾಲ್ಲೂಕಿನಲ್ಲಿ ಕೋಮುಗಲಭೆ ನಡೆದಿಲ್ಲ. ಸಹೋದರರಂತೆ ಇದ್ದೇವೆ. ರಾಜಕೀಯ ಲಾಭಕ್ಕಾಗಿ ಇದನ್ನು ಹಾಳು ಮಾಡಲು ಹೊರಟಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.