
ಬೆಂಗಳೂರು: ‘ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯು ವಿಶಿಷ್ಟವಾದ ಪ್ರಕಾರವಾಗಿದೆ. ಪ್ರಭಾ ಮಲ್ಲೇಶ್ ಅವರು, ಅದರ ವೈಶಿಷ್ಟ್ಯಕ್ಕೆ ಧಕ್ಕೆ ತರದೇ ಇರುವ ರೀತಿಯಲ್ಲಿ ಈ ಚಿತ್ರಕಲೆಗೆ ಹೊಸ ಆಯಾಮ ನೀಡಿದ್ದಾರೆ’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.
ಪ್ರಭಾ ಮಲ್ಲೇಶ್ ಅವರ ಮೈಸೂರು ಸಾಂಪ್ರದಾಯಿಕ ಚಿತ್ರಕಲಾ ಕೃತಿಗಳ ಸಂಕಲನ ‘ರೂಟೆಡ್ ಇನ್ ಗೋಲ್ಡ್’ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈ ಚಿತ್ರಕಲಾ ಪ್ರಕಾರವು ಪ್ರಧಾನವಾಗಿ ದೇವರ ಚಿತ್ರಗಳಿಗೆ ಮೀಸಲಾಗಿದೆ. ಆ ಶೈಲಿಯನ್ನು ಉಳಿಸಿಕೊಂಡು ಇತರ ವಸ್ತುವಿಷಯಗಳನ್ನೂ ಈ ಪ್ರಕಾರಕ್ಕೆ ಒಗ್ಗಿಸಿದ ಕೀರ್ತಿ ಪ್ರಭಾ ಅವರದ್ದು. ಈ ಪ್ರಕಾರಕ್ಕೆ ಮೂರನೇ ಆಯಾಮವನ್ನೂ ಮೊದಲ ಬಾರಿಗೆ ತಂದಿದ್ದು ಪ್ರಭಾ ಅವರು’ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ‘ರೇಖೆಗಳೇ ಪ್ರಧಾನವಾದ ಚಿತ್ರಕಲಾ ಪ್ರಕಾರವಿದು. ಜತೆಗೆ ಚಿನ್ನದ ಎಳೆಗಳನ್ನೂ ಕೂರಿಸಬೇಕಾದ ತಾಳ್ಮೆ ಇರಬೇಕು. ಇವುಗಳ ಮಧ್ಯೆ ಪ್ರಭಾ ಅವರು ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಅವುಗಳಲ್ಲಿ ವಿಶೇಷವಾದ 150 ಕೃತಿಗಳನ್ನು ಒಗ್ಗೂಡಿಸಿ ‘ರೂಟೆಡ್ ಟೊ ಗೋಲ್ಡ್’ ರೂಪಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.