ಬೆಂಗಳೂರು: ‘ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ. ನಾಗೇಂದ್ರ ಅವರೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹94 ಕೋಟಿ ಅಕ್ರಮ ವರ್ಗಾವಣೆ ಹಗರಣಕ್ಕೆ ಬಳಸಿರುವ ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿನ ಖಾತೆಯನ್ನು ತೆರೆಯಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು’ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು (ಎಸ್ಐಟಿ) ನ್ಯಾಯಾಲಯಕ್ಕೆ ತಿಳಿಸಿದೆ.
ಬಂಧಿತ ಆರೋಪಿ, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಬಿ.ಪದ್ಮನಾಭ ಅವರು ವಿಚಾರಣೆ ವೇಳೆ ನೀಡಿದ್ದ ಮಾಹಿತಿ ಆಧರಿಸಿ ನ್ಯಾಯಾಲಯಕ್ಕೆ ಎಸ್ಐಟಿ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ಈ ಮಾಹಿತಿ ಇದೆ. ನಾಗೇಂದ್ರ ಸೂಚನೆಯಂತೆ ಈ ಅಕ್ರಮ ನಡೆದಿದೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದೂ ಎಸ್ಐಟಿ ಹೇಳಿದೆ.
‘ನಾಗೇಂದ್ರ ಆಪ್ತ ಕಾರ್ಯದರ್ಶಿ ಆಗಿದ್ದ ದೇವೇಂದ್ರಪ್ಪ, ಅವರ ಆಪ್ತ ನೆಕ್ಕಂಟಿ ನಾಗರಾಜ್, ಸಂಬಂಧಿಕ ನಾಗೇಶ್ವರ್ ರಾವ್ ಸೇರಿದಂತೆ ನಾಲ್ವರು ಶಾಂಗ್ರಿ–ಲಾ ಹೋಟೆಲ್ನಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿದ್ದರು. ನಾಗರಾಜ್ ಹೊಸ ಖಾತೆ ತೆರೆಯುವಂತೆ ಹೇಳಿದಾಗ ಅದಕ್ಕೆ ನಿರಾಕರಿಸಿದ್ದೆ. ಆಗ ಹೋಟೆಲ್ ಹೊರ ಭಾಗದಲ್ಲಿ ನಾಗೇಂದ್ರ ಕುಳಿತಿದ್ದರು. ಅವರ ಬಳಿಗೆ ಎಲ್ಲರೂ ತೆರಳಿದಾಗ, ತಮ್ಮ ಜತೆಗಿರುವ ವ್ಯಕ್ತಿಯ ಹೆಸರಿನಲ್ಲಿ ಹೊಸ ಖಾತೆ ತೆರೆದು, ಠೇವಣಿ ಇಡುವಂತೆ ನಾಗೇಂದ್ರ ಅವರು ಕಳೆದ ವರ್ಷದ ಡಿಸೆಂಬರ್ನಲ್ಲಿ ಸೂಚಿಸಿದ್ದರು’ ಎಂದು ಪದ್ಮನಾಭ ವಿಚಾರಣೆಯಲ್ಲಿ ಹೇಳಿದ್ದಾರೆ.
ಪದ್ಮನಾಭ ಅವರ ಹೇಳಿಕೆಯನ್ನು ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಎಸ್ಐಟಿ, ಪುನಃ ಅವರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ನ್ಯಾಯಾಲಯ ಮನವಿಯನ್ನು ಪುರಸ್ಕರಿಸಿತ್ತು. ಅಧಿಕಾರಿಯು ವಿಚಾರಣೆ ವೇಳೆ ನೀಡಿದ್ದ ಹೇಳಿಕೆಯನ್ನು ಆಧರಿಸಿ ನಾಗೇಂದ್ರ ಅವರನ್ನು ತನಿಖೆಗೊಳಪಡಿಸಲು ತನಿಖಾ ತಂಡ ತಯಾರಿ ಮಾಡಿಕೊಂಡಿತ್ತು ಎಂದು ಮೂಲಗಳು ಹೇಳಿವೆ.
ನಿಗಮದ ಖಾತೆಯಿಂದ ಅಕ್ರಮವಾಗಿ ವರ್ಗಾವಣೆಯಾದ ₹94.73 ಕೋಟಿಯಲ್ಲಿ ಯಾವ ಆರೋಪಿಗೆ ಎಷ್ಟು ಪಾಲು ಹೋಗಿತ್ತು ಎಂಬುದನ್ನೂ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಎಸ್ಐಟಿಗೆ ಪ್ರಕರಣ ವರ್ಗಾವಣೆಯಾದ ಬಳಿಕ ತನಿಖೆ ಆರಂಭಿಸಿದ್ದ ತನಿಖಾಧಿಕಾರಿಗಳು, 11 ಮಂದಿಯನ್ನು ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ವಿಚಾರಗಳು ಬಯಲಾಗಿವೆ.
‘ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಸಂತನಗರ ಶಾಖೆಯಲ್ಲಿ ನಿಗಮಕ್ಕೆ ಸಂಬಂಧಿಸಿದ ಎರಡು ಖಾತೆಗಳಿದ್ದವು. ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಬಿ.ಪದ್ಮನಾಭ ಅವರು ಒಂದು ಖಾತೆಯನ್ನು ಸರ್ಕಾರದ ಅನುಮತಿ ಪಡೆಯದೇ ಆರೋಪಿಗಳ ಸೂಚನೆಯಂತೆ ಎಂ.ಜಿ.ರಸ್ತೆ ಶಾಖೆಗೆ ವರ್ಗಾವಣೆ ಮಾಡಿದ್ದರು. ಆ ಖಾತೆಗೆ ಸರ್ಕಾರದ ಖಜಾನೆ ಹುಜೂರ್–2 ಹಾಗೂ ಬೇರೆ ಬ್ಯಾಂಕ್ನಿಂದ ಒಟ್ಟು ₹187 ಕೋಟಿ ವರ್ಗಾವಣೆ ಮಾಡಿದ್ದರು. ನಂತರ, ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ಅವರ ಸಂಬಂಧಿ ನಾಗೇಶ್ವರ ರಾವ್ ಸೇರಿದಂತೆ ಹಲವರು ಹೈದರಾಬಾದ್ನ ಬ್ಯಾಂಕ್ಗೆ ₹94.73 ಕೋಟಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು’ ಎಂಬುದು ತನಿಖೆಯಿಂದ ಗೊತ್ತಾಗಿದೆ.
ನಾಗೇಂದ್ರ ಆಪ್ತಗೆ ₹25 ಲಕ್ಷ ‘ನೆಕ್ಕಂಟಿ ನಾಗರಾಜ್ ನಾಗೇಶ್ವರ ರಾವ್ ಸತ್ಯನಾರಾಯಣ ವರ್ಮರಿಂದ ಬೆಂಗಳೂರಿನ ಮೌರ್ಯ ಹೋಟೆಲ್ ಬಳಿ ತಮ್ಮ ಪಾಲಿನ ಹಣವನ್ನು ಪದ್ಮನಾಭ ಪಡೆದುಕೊಂಡಿದ್ದರು. ಆ ಪೈಕಿ ₹3.62 ಕೋಟಿಯನ್ನು ಸೂಟ್ಕೇಸ್ ಬ್ಯಾಗ್ ಕಾರಿನಲ್ಲಿ ಪದ್ಮನಾಭ ಬಚ್ಚಿಟ್ಟಿದ್ದರು. ಅದನ್ನು ನಾಗೇಂದ್ರ ಮತ್ತು ದದ್ದಲ್ ಆಪ್ತರಿಗೆ ಹಂತಹಂತವಾಗಿ ಹಂಚಿಕೆ ಮಾಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ. ‘ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಆಪ್ತ ಸಹಾಯಕ ಪಂಪಣ್ಣಗೆ ₹5 ಲಕ್ಷ ಹಾಗೂ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ಗೆ ₹25 ಲಕ್ಷ ಬಿಬಿಎಂಪಿ ಕಚೇರಿ ಸಮೀಪದ ಶ್ರೀನಿಧಿ ಹೋಟೆಲ್ ಬಳಿಯ ಪಾರ್ಕ್ನಲ್ಲಿ ಸಂದಾಯ ಆಗಿತ್ತು. ಶೇಷಾದ್ರಿಪುರದ ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿ ಬಳಿ ಪಂಪಣ್ಣಗೆ ಮತ್ತೊಮ್ಮೆ ₹50 ಲಕ್ಷ ಕೊಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ. ‘ಹೈದರಾಬಾದ್ನಿಂದ ಏಪ್ರಿಲ್ ಕೊನೆ ವಾರದಲ್ಲಿ ಬಂದಿದ್ದ ಮಧ್ಯವರ್ತಿ ಸತ್ಯಾನಾರಾಯಣ ವರ್ಮ ಎರಡು ಬ್ಯಾಗ್ನಲ್ಲಿ ₹1.20 ಕೋಟಿ ತಂದು ಪದ್ಮನಾಭಗೆ ಕೊಟ್ಟಿದ್ದರು. ಮಾಜಿ ಲೆಕ್ಕಾಧಿಕಾರಿ ಪರುಶುರಾಮ್ಗೂ ₹25 ಲಕ್ಷ ಸಂದಾಯ ಆಗಿತ್ತು’ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಬೆಂಗಳೂರಿನ ಕಂಪನಿಗಳ ಹೆಸರು ವಿಳಾಸ ಬಳಸಿಕೊಂಡು ಆರೋಪಿಗಳು ನಕಲಿ ಖಾತೆ ತೆರೆದು ಹಣ ಜಮೆ ಮಾಡಿದ್ದರು. ನಂತರ ಆ ಖಾತೆಗಳಿಂದ ಹಣ ಪಡೆದುಕೊಂಡಿದ್ದರು.
* ಬೆಂಗಳೂರಿನ ರಾಮ್ ಎಂಟರ್ಪ್ರೈಸೆಸ್ –₹5.7 ಕೋಟಿ
* ಜಿ.ಎನ್.ಇಂಡಸ್ಟ್ರೀಸ್ –₹4.42 ಕೋಟಿ
* ಸುಜಲಾ ಎಂಟರ್ಪ್ರೈಸೆಸ್–₹5.63 ಕೋಟಿ
* ನೊವೆಲ್ ಸೆಕ್ಯುರಿಟಿ ಸರ್ವಿಸ್–₹4 ಕೋಟಿ
ಹೈದರಾಬಾದ್ನ ‘ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ’ಯಲ್ಲಿ (ಎಫ್ಎಫ್ಸಿಸಿಎಸ್ಎಲ್) 18 ನಕಲಿ ಖಾತೆ ತೆರೆಯಲಾಗಿತ್ತು. ಆ ನಕಲಿ ಖಾತೆಗಳಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಜಿ.ರಸ್ತೆ ಶಾಖೆಯಿಂದ ₹94.73 ಕೋಟಿ ವರ್ಗಾವಣೆಗೊಂಡಿತ್ತು. ನಕಲಿ ಖಾತೆದಾರರು ಇತರೆ ಬ್ಯಾಂಕ್ ಖಾತೆಗಳಿಗೆ ನೆಟ್ ಬ್ಯಾಂಕಿಂಗ್ ಆರ್ಟಿಜಿಎಸ್ ಫೋನ್ ಪೇ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಅಲ್ಲಿಂದ ಬೇರೆ ಬೇರೆ ರೂಪದಲ್ಲಿ ಹಣ ಆರೋಪಿಗಳ ಕೈಸೇರಿತ್ತು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.