ADVERTISEMENT

‘ವಿಪಕ್ಷವಾಗಲೂ ಕಾಂಗ್ರೆಸ್ ನಾಲಾಯಕ್’: ನಳಿನ್‌ ಕುಮಾರ್ ಕಟೀಲ್ ವಾಗ್ದಾಳಿ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 12:50 IST
Last Updated 24 ಫೆಬ್ರುವರಿ 2020, 12:50 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಸಮಕ್ಷಮದಲ್ಲಿ ಪಕ್ಷ ಧ್ವಜ ಸ್ವೀಕರಿಸುವ ಮೂಲಕ ಸುದರ್ಶನ ಎಂ. ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಮಂಗಳೂರಿನ ಪುರಭವನದಲ್ಲಿ ಪದಗ್ರಹಣ ಮಾಡಿದರು
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಸಮಕ್ಷಮದಲ್ಲಿ ಪಕ್ಷ ಧ್ವಜ ಸ್ವೀಕರಿಸುವ ಮೂಲಕ ಸುದರ್ಶನ ಎಂ. ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಮಂಗಳೂರಿನ ಪುರಭವನದಲ್ಲಿ ಪದಗ್ರಹಣ ಮಾಡಿದರು   

ಮಂಗಳೂರು: ‘135 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್‌, ಇಂದು ವಿರೋಧ ಪಕ್ಷವಾಗಲೂ ನಾಲಾಯಕ್ ಆಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಲೇವಡಿ ಮಾಡಿದರು.

ನಗರದ ಪುರಭವನದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಧಿಕಾರದ ಅಹಂ, ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಸಂಘಟನಾ ಶಕ್ತಿ ವೈಫಲ್ಯ ಹಾಗೂ ಬೌದ್ಧಿಕ ವಿಚಾರಗಳಿಂದ ಹೊರಗುಳಿದ ಕಾರಣ ಕಾಂಗ್ರೆಸ್‌ ಈ ಸ್ಥಿತಿಗೆ ಬಂದಿದೆ. ಅದು ಕೆಲವು ನಾಯಕರ ಆಟ, ಕೂಟ, ನಡೆದಾಟಕ್ಕೆ ಸೀಮಿತವಾಗಿದ್ದು, ಜನರಿಂದ ದೂರವಾಗಿದೆ’ ಎಂದು ವಿಶ್ಲೇಷಿಸಿದರು. ಮೇಲಿನ ಅಂಶಗಳಿಗೆ ನಮ್ಮ ಪದಾಧಿಕಾರಿಗಳು ಯಾವತ್ತೂ ಬಲಿಯಾಗಬಾರದು ಎಂದೂ ಎಚ್ಚರಿಸಿದರು.

ADVERTISEMENT

‘ಸ್ವಾತಂತ್ರ್ಯದ ತನಕ ಮಹಾತ್ಮ ಗಾಂಧಿ ನೇತೃತ್ವದ ಕಾಂಗ್ರೆಸ್ ಅತ್ಯುತ್ತಮವಾಗಿತ್ತು’ ಎಂದು ಶ್ಲಾಘಿಸಿದ ಅವರು, ‘ನೆಹರೂನಿಂದ ಮನಮೋಹನ್ ಸಿಂಗ್‌ ತನಕ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರನ್ನು ಹೊರತುಪಡಿಸಿ, ಎಲ್ಲ ಕಾಂಗ್ರೆಸ್‌ ಪ್ರಧಾನಿಗಳ ಮೇಲೆ ಭ್ರಷ್ಟಾಚಾರಗಳು ಕೇಳಿಬಂದಿವೆ’ ಎಂದು ಆರೋಪಿಸಿದರು.

‘ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್, ‘ಇಂದಿರಾ ಕೀ’, ‘ರಾಜೀವ್‌ ಕೀ’, ‘ಸೋನಿಯಾ ಕೀ’, ‘ರಾಹುಲ್‌ ಕೀ’, ‘ಪ್ರಿಯಾಂಕ ಕೀ’ ಜೈಕಾರಗಳಿಗೆ ಸೀಮಿತಗೊಂಡಿತು. ಆದರೆ, ಮೋದಿ ಪ್ರಭಾವದಿಂದಾಗಿ ಈಚೆಗೆ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ್ದಾರೆ. ದೇಶದ ಧ್ವಜ ಹಿಡಿಯಲು ಒಪ್ಪದ ಹಲವರು ಇಂದು ಬೀದಿಯಲ್ಲಿ ತ್ರಿವರ್ಣ ಹಿಡಿದು ಪ್ರತಿಭಟಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದಾಗ ಸಂತೋಷವಾಗುತ್ತದೆ’ ಎಂದು ಕುಟುಕಿದರು.

‘ನಾವು ರೋಡು–ತೋಡು ಮಾಡಲು ಬಂದಿಲ್ಲ. ಭಾರತವನ್ನು ವಿಶ್ವ ಜಗದ್ಗುರು ಮಾಡುವುದೇ ಗುರಿ ಎಂದು ಮೋದಿಯವರು ಹೇಳಿದ್ದಾರೆ. ಆದರೆ, ‘ಪಾಕ್ ಜಿಂದಾಬಾದ್‌’ ಎಂದು ರಾಷ್ಟ್ರ ವಿರೋಧಿ ಘೋಷಣೆ ಕೂಗುವವರಿಗೆ ಕಮ್ಯುನಿಸ್ಟರು ಮಾತ್ರವಲ್ಲ, ಕಾಂಗ್ರೆಸಿಗರೂ ಪ್ರೇರಣೆ ನೀಡುತ್ತಿದ್ದಾರೆ’ ಎಂದು ಆಪಾದಿಸಿದರು.

‘ಪಕ್ಷದ ಹುದ್ದೆಗಳು ವಿಸಿಟಿಂಗ್ ಕಾರ್ಡ್‌ಗೆ ಅಥವಾ ಅಧಿಕಾರಕ್ಕಲ್ಲ, ಅದು ಜವಾಬ್ದಾರಿ. ನಿಮ್ಮ ಹುದ್ದೆಯು ಹೆಗಲ ಮೇಲೆ ಭಾರದಂತಿರಲಿ. ತಲೆಗೇರಿಸಿಕೊಂಡು ದಾರಿ ತಪ್ಪಬೇಡಿ. ಪಂಚಾಯಿತಿ ಚುನಾವಣೆಯಲ್ಲಿ ಶೇ 80ರಷ್ಟು ಗೆಲುವು ಸಾಧಿಸಲು ಪಣತೊಡಿ’ ಎಂದರು.

ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸುದರ್ಶನ ಎಂ. ಮಾತನಾಡಿ, ‘ಕಾರ್ಯಕರ್ತನೊಬ್ಬ ಪ್ರಧಾನಿ, ರಾಷ್ಟ್ರಾಧ್ಯಕ್ಷ, ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಎಂದು ತೋರಿಸಿಕೊಟ್ಟ ಪಕ್ಷ ಬಿಜೆಪಿ. ಅದೇ ರೀತಿ ನನ್ನನ್ನೂ ಅಧ್ಯಕ್ಷನನ್ನಾಗಿ ಮಾಡಿದೆ’ ಎಂದರು.

ನಿರ್ಗಮಿತ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ‘ನನ್ನ ಅವಧಿಯಲ್ಲಿ 8ರಲ್ಲಿ 7 ಶಾಸಕರು, 10ರಲ್ಲಿ 9 ಸ್ಥಳೀಯ ಸಂಸ್ಥೆಗಳು, ಮಂಗಳೂರು ಮಹಾನಗರ ಪಾಲಿಕೆಯನ್ನು ಜಯಿಸಿರುವುದು ಸಂತಸ ನೀಡಿದೆ. ಇದಕ್ಕೆ ಎಲ್ಲರ ಸಂಘಟಿತ ಪ್ರಯತ್ನ ಕಾರಣ’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದೇ ನಮ್ಮ ನಿಲುವು. ರಾಜಕಾರಣ ವೃತ್ತಿಯಾಗದೇ ವ್ರತವಾಗಬೇಕು. ಪಕ್ಷದ ಅಧ್ಯಕ್ಷರು ಸಚಿವನಿಗಿಂತಲೂ ದೊಡ್ಡವರು’ ಎಂದರು.

ಶಾಸಕರಾದ ಅಂಗಾರ, ವೇದವ್ಯಾಸ ಕಾಮತ್, ಭರತ್‌ ಶೆಟ್ಟಿ, ಉಮನಾಥ ಕೋಟ್ಯಾನ್, ಹರೀಶ್ ಪೂಂಜಾ, ಮುಖಂಡರಾದ ಉದಯಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.