ADVERTISEMENT

ಕಾಂಗ್ರೆಸ್ ಒಳಜಗಳ ಶೀಘ್ರ ಬೀದಿಗೆ: ನಳಿನ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 22:11 IST
Last Updated 8 ನವೆಂಬರ್ 2020, 22:11 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್   

ತುಮಕೂರು: ಸಿದ್ದರಾಮಯ್ಯ ಶಿರಾ ಮತ್ತು ಡಿ.ಕೆ.ಶಿವಕುಮಾರ್ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿವಹಿಸಿಕೊಂಡಿದ್ದರು. ಡಿ.ಕೆ.ಶಿವಕುಮಾರ್, ಶಿರಾದಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದಕ್ಕಿಂತ ಸೋಲಿಸುವುದು ಹೇಗೆ ಎನ್ನುವ ಬಗ್ಗೆ ಹೆಚ್ಚು ತಲೆಬಿಸಿ ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಆರ್‌.ಆರ್‌.ನಗರದಲ್ಲಿ ಕಾಂಗ್ರೆಸ್‌ ಸೋಲಿಸುವುದು ಹೇಗೆ ಎನ್ನುವ ಬಗ್ಗೆ ಯೋಚಿಸುತ್ತಿದ್ದರು. ಕಾಂಗ್ರೆಸ್‌ನ ಒಳಜಗಳ ಸಹ ಬಿಜೆಪಿಗೆ ಉಪಚುನಾವಣೆಯಲ್ಲಿ ಅನುಕೂಲವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನಲ್ಲಿ ಕಳೆದು ಹೋಗುವ ಭಯ ಇದೆ. ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್‌ನ ಬೀದಿ ಜಗಳವನ್ನು ಮತ್ತಷ್ಟು ಬೀದಿಗೆ ತರಲಿದೆ. ಶಿರಾದಲ್ಲಿ 25 ಸಾವಿರಕ್ಕಿಂತ ಹೆಚ್ಚು ಮತಗಳು ಹಾಗೂ ಆರ್‌.ಆರ್‌.ನಗರದಲ್ಲಿ 40 ಸಾವಿರ ಮತಗಳಿಂದ ಬಿಜೆಪಿ ಗೆಲುವು ಸಾಧಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋತಾಗ ಮತ್ತು ಸೋಲಿನ ಭಯ ಉಂಟಾದಾಗ ಕಾಂಗ್ರೆಸ್ ನಾಯಕರು ಇವಿಎಂ ಸರಿ ಇಲ್ಲ ಎಂದು ದೂರುವರು. ನಮ್ಮ ಕೈಯಲ್ಲಿಯೇ ಇವಿಎಂ ಇದಿದ್ದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಗೆಲ್ಲಲು ಬಿಡುತ್ತಿದ್ದೆವಾ. ಕಾಂಗ್ರೆಸ್ ನಾಯಕರ ಈ ಆರೋಪ ಮತದಾರರಿಗೆ ಮಾಡುವ ಅವಮಾನ ಎಂದರು.

ADVERTISEMENT

ವ್ಯಕ್ತಿಪೂಜೆ: ನಗರದಲ್ಲಿ ನಡೆದ ವಿಭಾಗದ ಮಟ್ಟದ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಮಾತನಾಡಿದ ಕಟೀಲ್, ‘ಸ್ವಾತಂತ್ರ್ಯದ ನಂತರ ರಾಷ್ಟ್ರಮಾತೆ ಪೂಜೆ ಮಾಡಬೇಕಾಗಿದ್ದ ‌ಕಾಂಗ್ರೆಸ್ ಇಂದಿರಾಗಾಂಧಿ, ಸೋನಿಯಾ ಗಾಂಧಿ ಎಂದು ವ್ಯಕ್ತಿ ಪೂಜೆ ಮಾಡಿತು. ಬಿಜೆಪಿ ಆಡಳಿತದಲ್ಲಿ ದೇಶ ರಾಮರಾಜ್ಯವಾಗುತ್ತಿದೆ. ಮಹಾತ್ಮಗಾಂಧಿ ಅವರು ಜಾತ್ಯತೀತ ಎನ್ನುವ ಪದವನ್ನೇ ಬಳಸಲಿಲ್ಲ. ಅವರು ಸಹ ರಾಮರಾಜ್ಯದ ಮಾತುಗಳನ್ನು ಆಡಿದ್ದರು. ರಾಮನ ಆದರ್ಶಗಳನ್ನು ಪ್ರತಿಯೊಬ್ಬರಲ್ಲೂ ಬಿಜೆಪಿ ಮೂಡಿಸಲಿದೆ ಎಂದು ಹೇಳಿದರು.

ವ್ಯಕ್ತಿಪೂಜೆ ಕಾಂಗ್ರೆಸ್ ಸಂಸ್ಕೃತಿ

‘ಸ್ವಾತಂತ್ರ್ಯದ ನಂತರ ಕಾಂಗ್ರೆಸ್‌ ದೇಶದಲ್ಲಿ ವ್ಯಕ್ತಿಪೂಜೆ ಸಂಸ್ಕೃತಿ ಹುಟ್ಟು ಹಾಕಿತು’ ಎಂದು ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು.

ನಗರದಲ್ಲಿ ನಡೆದ ವಿಭಾಗದಮಟ್ಟದ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯದ ನಂತರ ರಾಷ್ಟ್ರಮಾತೆ ಪೂಜೆ ಮಾಡಬೇಕಾಗಿದ್ದ ‌ಕಾಂಗ್ರೆಸ್ ಇಂದಿರಾಗಾಂಧಿ, ಸೋನಿಯಾ ಗಾಂಧಿ ಎಂದು ವ್ಯಕ್ತಿ ಪೂಜೆ ಮಾಡಿತು’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.