ADVERTISEMENT

ರಸ್ತೆ, ಚರಂಡಿ ಬಿಟ್ಟು ಲವ್‌ ಜಿಹಾದ್‌ ಬಗ್ಗೆ ಮಾತನಾಡಿ: ನಳಿನ್‌ ಕುಮಾರ್‌ ಕಟೀಲ್‌

ಕಾರ್ಯಕರ್ತರಿಗೆ ನಳಿನ್‌ ಕುಮಾರ್ ಕಟೀಲ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 22:29 IST
Last Updated 4 ಜನವರಿ 2023, 22:29 IST
 ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌   

ಮಂಗಳೂರು: ‘ನೀವು ರಸ್ತೆ, ಚರಂಡಿ ಯಂತಹ ಸಣ್ಣ ವಿಚಾರದ ಬಗ್ಗೆ ಮಾತನಾಡಬೇಡಿ. ನಿಮ್ಮ ಮಕ್ಕಳ ಬದುಕಿನ ಭವಿಷ್ಯದ ಪ್ರಶ್ನೆ ‘ಲವ್‌ ಜಿಹಾದ್‌’ ನಿಲ್ಲಿಸಬೇಕಾದರೆ ಭಾರತೀಯ ಜನತಾ ಪಾರ್ಟಿಯೇ ಬೇಕು ಎಂದು ಜನರಿಗೆ ಮನವರಿಕೆ ಮಾಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪಕ್ಷದ ಕಾರ್ಯಕರ್ತ ರನ್ನು ಉದ್ದೇಶಿಸಿ ಹೇಳಿರುವ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಿಜೆಪಿ ವತಿಯಿಂದ ಹಮ್ಮಿಕೊಂಡಿ ರುವ ‘ಬೂತ್‌ ವಿಜಯ ಅಭಿಯಾನ’ಕ್ಕೆ ಇಲ್ಲಿ ಸೋಮವಾರ ಚಾಲನೆ ನೀಡಿದ್ದ ಕಟೀಲ್‌ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು.

‘ಶಾಲೆಗೆ ಹೋದ ಮಕ್ಕಳು ಮತ್ತೆ ಮನೆಗೆ ಸುರಕ್ಷಿತವಾಗಿ ಮರಳುತ್ತಾರೆ ಎನ್ನುವ ಸ್ಥಿತಿ ಇಲ್ಲ. ದಕ್ಷಿಣ ಕನ್ನಡದಲ್ಲೂ ಆತಂಕದ ಸ್ಥಿತಿ ಇದೆ. ಈ ಆತಂಕ ನಿವಾರಣೆ ಆಗಬೇಕಾದರೆ, ಕರ್ನಾಟಕದಲ್ಲೂ ‘ಲವ್‌ ಜಿಹಾದ್‌’ ನಿಷೇಧಿಸುವ ಕಾನೂನಿನ ಅಗತ್ಯ ಇದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದೇವೆ. ಲವ್‌ ಜಿಹಾದ್‌ ನಿಷೇಧ ಕಾನೂನನ್ನೂ
ಜಾರಿಗೆ ತರುತ್ತೇವೆ’ ಎಂದು ಅವರು ಹೇಳಿದ್ದರು.

ADVERTISEMENT

‘ಕಾರ್ಯಕರ್ತರು ಮನೆಮನೆಗೆ ನುಗ್ಗಬೇಕು. ಇನ್ನು 100 ದಿನ ವಿಶ್ರಮಿಸ ಬಾರದು. ಯಕ್ಷಗಾನದಲ್ಲೂ ಬಿಜೆಪಿ ಪ್ರಚಾರ ಆರಂಭವಾಗಬೇಕು’ ಎಂದೂ ಅವರು ಹೇಳಿದ್ದರು.

ನಳಿನ್‌ ಕುಮಾರ್‌ ಅವರ ಈ ಹೇಳಿಕೆಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌, ‘ಬಿಜೆಪಿಯ ಡಬಲ್ ಎಂಜಿನ್‌ ಸರ್ಕಾರದಲ್ಲಿ ಕೇವಲ ಕೋಮುದ್ವೇಷದ ಇಂಧನ ತುಂಬಿಕೊಂಡಿದೆ. ಅದರ ಸೈಲೆನ್ಸರ್‌ನಿಂದ ಬರುವ ಹೊಗೆಯಲ್ಲೂ ವಿಷವೇ ಇದೆ’ ಎಂದರು.

‘ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಗುಂಡಿಗಳನ್ನು ಮುಚ್ಚುವ ಅರ್ಹತೆ ಹಾಗೂ ಯೋಗ್ಯತೆಗಳೆರಡೂ ಬಿಜೆಪಿ ಸರ್ಕಾರಕ್ಕಿಲ್ಲ. ಇಷ್ಟು ವರ್ಷಗಳಲ್ಲಿ ಈ ಸರ್ಕಾರ ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ. ಹಾಗಾಗಿ ಚುನಾವಣೆ ಸಮೀಪಿಸುವಾಗ ಜನರ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.