
ಕಾಂಗ್ರೆಸ್
ಬೆಂಗಳೂರು: ‘ನಮ್ಮ ಮೆಟ್ರೊ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಾದರೂ, ಮಾಲೀಕತ್ವ ಕೇಂದ್ರಕ್ಕೇ ಸೇರಿದೆ. ಇಂತಹ ವಿಷಯಗಳ ಮಾಹಿತಿ ಇಲ್ಲದವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿ ನೇಮಿಸಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ಮಾಲೀಕರು ಯಾರು ಎಂದು 2023ರಲ್ಲಿ ಹೈಕೋರ್ಟ್ ಕೇಳಿತ್ತು. ಬಿಎಂಆರ್ಸಿಎಲ್ ಮಾಲೀಕತ್ವ ಕೇಂದ್ರ ಸರ್ಕಾರದ್ದೇ ಎಂದು ಮಾಹಿತಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಸಂಸದ ತೇಜಸ್ವಿ ಸೂರ್ಯ ಚೆನ್ನಾಗಿ ನಟನೆ ಮಾಡುತ್ತಾರೆ. ಬಿಜೆಪಿ ನಾಯಕರು ನಟನೆ ಮಾಡುವುದರಲ್ಲಿ ಪೈಪೋಟಿಗೆ ಇಳಿದಿದ್ದಾರೆ. ನಮ್ಮ ಮೆಟ್ರೊ ಯೋಜನೆಯ ಹಲವು ಮಾಹಿತಿಗಳು ಬಿಜೆಪಿಗೆ ಗೊತ್ತಿಲ್ಲ. ಈಗ ಮೆಟ್ರೊ ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರ ತಡೆ ನೀಡಿದೆ ಎಂದು ಹೇಳುತ್ತಿದ್ದಾರೆ’ ಎಂದು ದೂರಿದರು.
ಮೆಟ್ರೊದಲ್ಲಿ ದಿನಕ್ಕೆ ಸರಾಸರಿ ಎಂಟು ಲಕ್ಷ ಜನರು ಪ್ರಯಾಣ ಮಾಡುತ್ತಾರೆ. 2025-26ರಲ್ಲಿ ಮೆಟ್ರೊಗೆ ₹229 ಕೋಟಿ ಬಂದಿತ್ತು. ₹624 ಕೊಟಿ ನಷ್ಟವಾಗಿತ್ತು. ಇದುವರೆಗೆ ₹20,222 ಕೋಟಿ ಯೋಜನೆಗೆ ಖರ್ಚಾಗಿದೆ. ಆದರೆ, ಕೇಂದ್ರದಿಂದ ಬಿಡಿಗಾಸು ಬಂದಿಲ್ಲ. ರಾಜ್ಯ ಸರ್ಕಾರ ಸಾಲ ಸೇರಿದಂತೆ ವಿವಿಧ ರೂಪದಲ್ಲಿ ಸಂಪನ್ಮೂಲ ಸಂಗ್ರಹ ಮಾಡುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಮುಖಂಡರು ಖಾಲಿ ಟ್ರಂಕ್ ಹಾಗೂ ಚೊಂಬು ಹಿಡಿದು ನೃತ್ಯದ ಮೂಲಕ ಸಂಸದ ತೇಜಸ್ವಿಸೂರ್ಯ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.