ADVERTISEMENT

ನಂಜನಗೂಡು ನರಭಕ್ಷಕ ಹುಲಿ ಸೆರೆ: ನಿಟ್ಟುಸಿರು ಬಿಟ್ಟ ಅರಣ್ಯ ಇಲಾಖೆ

ಹೆಡಿಯಾಲ ಅರಣ್ಯ ವಲಯದ ಬಳ್ಳೂರುಹುಂಡಿಯ ಕಲ್ಲಹಾರಖಂಡಿ ಎಂಬಲ್ಲಿ ಬೋನಿಗೆ ಬಿದ್ದ 10 ವರ್ಷದ ಗಂಡು ಹುಲಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 4:19 IST
Last Updated 28 ನವೆಂಬರ್ 2023, 4:19 IST
<div class="paragraphs"><p>ಸೆರೆಯಾದ ನರಭಕ್ಷಕ ಹುಲಿ</p></div>

ಸೆರೆಯಾದ ನರಭಕ್ಷಕ ಹುಲಿ

   

ಮೈಸೂರು/ನಂಜನಗೂಡು: ನಂಜನಗೂಡು ತಾಲ್ಲೂಕಿನ ಹೆಡಿಯಾಲ ಅರಣ್ಯ ವಲಯದ ಬಳ್ಳೂರುಹುಂಡಿಯಲ್ಲಿ ಮಹಿಳೆ ಕೊಂದಿದ್ದ 10 ವರ್ಷದ ಗಂಡು ಹುಲಿ ಮಂಗಳವಾರ ಮುಂಜಾನೆ ಸೆರೆಯಾಗಿದೆ.

ಬಳ್ಳೂರುಹುಂಡಿ ಗ್ರಾಮದ ಕಲ್ಲಹಾರಖಂಡಿ ಎಂಬ ಸ್ಥಳದಲ್ಲಿ ಹಸುವಿನ ಕಳೇಬರ ತಿನ್ನಲು ಬಂದಾಗ ಅರಿವಳಿಕೆ ತಜ್ಞ ಡಾ.ವಾಸೀಂ ಅವರು ನೀಡಿದ ಅರಿವಳಿಕೆಗೆ ಹುಲಿ ಬಿದ್ದಿದೆ. ಬಲೆ ಹಾಕಿ ಹಿಡಿದು, ಮೈಸೂರಿನ ಪುನರ್ ವಸತಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ADVERTISEMENT

ಎರಡು ದಿನಗಳ ಹಿಂದಷ್ಟೇ ಹಸುವನ್ನು ಕೊಂದಿದ್ದ ಜಾಗದಲ್ಲಿ ಅರಣ್ಯ ಇಲಾಖೆ ಕ್ಯಾಮೆರಾ ಅಳವಡಿಸಿತ್ತು. ಕೊಂದಿದ್ದ ಹಸು ತಿನ್ನಲು ಹುಲಿ ಬರುವ ನಿರೀಕ್ಷೆಯಲ್ಲಿ ಬೋನು ಇರಿಸಲಾಗಿತ್ತು. ಅದರಲ್ಲಿ ಡಾ. ವಾಸೀಂ ಹಾಗೂ ಅರಣ್ಯ ಸಿಬ್ಬಂದಿ ಬೋನಿನ ಒಳಗೆ ಕಾಯ್ದು ಕುಳಿತಿದ್ದರು.

'ಜಾನುವಾರು ತಿನ್ನಲು ಬಂದಾಗ ಅರೆವಳಿಕೆ ನೀಡಿ ಸೆರೆ ಹಿಡಿಯಲಾಗಿದೆ' ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು.

3 ದಿನದಿಂದ ಕಾರ್ಯಾಚರಣೆ

ಹುಲಿಯ ಸೆರೆಗೆ ಅರಣ್ಯ ಇಲಾಖೆಯು ಶನಿವಾರದಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು.

ಸಾಕಾನೆಗಳಾದ ಪಾರ್ಥಸಾರಥಿ, ರೋಹಿತ, ಹಿರಣ್ಯ ಜೊತೆಗೆ ಅರಣ್ಯ ಇಲಾಖೆಯ 12 ಅಧಿಕಾರಿಗಳು ಹಾಗೂ 195 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ನಾಗಣಾಪುರ, ಡೋರನಕಟ್ಟೆ, ವೆಂಕಟಗಿರಿ ಹಾಗೂ ವಡೆಯನಪುರ ಕಾಲೊನಿಗಳ ತಲಾ 25 ಗಿರಿಜನರೂ ನರಹಂತಕ ಹುಲಿಯ ಸೆರೆಗೆ ಶ್ರಮಿಸಿದ್ದರು.

ವಿಶೇಷ ಹುಲಿ ಸಂರಕ್ಷಣಾ ದಳ, ಚಿರತೆ ಕಾರ್ಯಪಡೆ ಹಾಗೂ ಆನೆ ಕಾರ್ಯಪಡೆಗಳ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು. 50 ಸಿ–1 ಕ್ಯಾಮೆರಾ ಹಾಗೂ 5 ಜಿಎಸ್‌ಎಂ ಕ್ಯಾಮೆರಾಗಳು, ಅಗತ್ಯ ಔಷಧಿ, 10 ವಾಹನಗಳನ್ನು ಬಳಸಲಾಗಿತ್ತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ. ಪರಮೇಶ್‌, ಕೆ.ಆರ್. ನಾರಾಯಣ, ಡಿ. ಶ್ರೀನಿವಾಸ, ಅಮೃತ ಮಾಯಪ್ಪನವರ ಹಾಗೂ ಪಶು ವೈದ್ಯಾಧಿಕಾರಿ ವಾಸೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.