ಕಾರವಾರ: ಭಾರತೀಯ ನೌಕಾಪಡೆಯ ಗಸ್ತು ಹಡಗು ‘ಐ.ಎನ್.ಎಸ್ ಸುಮೇಧಾ’ದಲ್ಲಿ ಎಂಜಿನ್ನ ಫ್ಲೈವೀಲ್ ತುಂಡಾಗಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ನೌಕಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
ಹಡಗಿನ ಎಂಜಿನ್ ರೂಂ ಆರ್ಟಿಫೈಸರ್ ಆಗಿದ್ದ ಹರಿಯಾಣದ ಝಜ್ಜರ್ನ ಗೌರವ್ ದತ್ (27) ಮೃತರು. ಮೇ 19ರಂದು ಹಡಗು ಅರಬ್ಬಿ ಸಮುದ್ರದಎಡನ್ ಕೊಲ್ಲಿಯಲ್ಲಿ ಗಸ್ತು ಸಂಚರಿಸುತ್ತಿದ್ದಾಗಅವಘಡ ನಡೆದಿತ್ತು. ಹಡಗನ್ನು ಕಾರವಾರದ ಸೀಬರ್ಡ್ ನೌಕಾನೆಲೆಯತ್ತ ತರುವ ಮೊದಲೇ ಅವರುಕೊನೆಯುಸಿರೆಳೆದಿದ್ದರು. ಈ ಪ್ರದೇಶವುಕಾರವಾರದಿಂದ ಸುಮಾರು 1,300 ನಾಟಿಕಲ್ ಮೈಲು (2,400 ಕಿಲೋಮೀಟರ್) ದೂರದಲ್ಲಿದೆ.
‘ಪ್ರಕರಣದ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತದೇಹವನ್ನು ಹೆಲಿಕಾಪ್ಟರ್ ಮೂಲಕ ಅವರ ಸ್ವಗ್ರಾಮಕ್ಕೆ ಕಳುಹಿಸಲಾಗಿದೆ. ಅಲ್ಲಿ ಮೇ 25ರಂದು ಸೈನ್ಯದ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.