ADVERTISEMENT

ನಳಿನ್‌ ಕುಮಾರ್ ಕಟೀಲ್‌ ಆಡಿಯೊ: ದೆಹಲಿಯಿಂದ ಬರ್ತಾರೆ ಹೊಸ ಸಿಎಂ?

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 20:36 IST
Last Updated 18 ಜುಲೈ 2021, 20:36 IST
ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌   

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆಯ ಬಿಸಿ ಬಿಸಿ ಚರ್ಚೆಯ ಮಧ್ಯೆ, ‘ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಯಾಗಿ ದೆಹಲಿಯಿಂದ ಬರಲಿದ್ದಾರೆ. ಇಲ್ಲಿಯವರನ್ನು ಆಯ್ಕೆ ಮಾಡುವ ಸಾಧ್ಯತೆ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರು ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಕುರಿತು ಅವರು ಮಾತನಾಡಿರುವ ಆಡಿಯೋವೊಂದು ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ದೆಹಲಿಗೆ ತೆರಳಿದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತಾರಕಕ್ಕೇ ಏರಿತ್ತು. ನಾಯಕತ್ವ ಬದಲಾವಣೆ ಇಲ್ಲ ಎಂದೇ ಅವರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ, ಕಟೀಲ್‌ ಅವರು ಆಡಿರುವ ಮಾತು ನಾಯಕತ್ವ ಬದಲಾವಣೆಗೆ ಪುಷ್ಟಿ ನೀಡಿದೆ.

ADVERTISEMENT

ಕಟೀಲ್‌ ಅವರು ತುಳುವಿನಲ್ಲಿ ಮಾತನಾಡಿದ್ದು, ಅದರಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತ್ರವಲ್ಲ, ಹಿರಿಯ ಸಚಿವರಾದ ಜಗದೀಶ್‌ ಶೆಟ್ಟರ್‌, ಈಶ್ವರಪ್ಪ ಸೇರಿ ಹಲವು ಹಿರಿಯರನ್ನು ಕೈಬಿಟ್ಟು ಹೊಸ ತಂಡವನ್ನೇ ಕಟ್ಟುವ ಸ್ಪಷ್ಟ ಸೂಚನೆ ನೀಡಿದ್ದಾರೆ.

ಇದೀಗ ಮುಖ್ಯಮಂತ್ರಿ ಹುದ್ದೆಗೆ ದೆಹಲಿಯಿಂದ ಬರುವ ನಾಯಕ ಯಾರು ಎಂಬ ಚರ್ಚೆಯೂ ಆರಂಭವಾಗಿದೆ.

ನಳಿನ್‌ ಹೇಳಿದ್ದೇನು?:

ನಳಿನ್‌: ಯಾರಿಗೂ ಹೇಳಲು ಹೋಗಬೇಡಿ.

ಈಶ್ವರಪ್ಪ, ಜಗದೀಶ ಶೆಟ್ಟರ್‌.... ಆ ತಂಡವನ್ನೇ ತೆಗೆಯುತ್ತೇವೆ.

ಎಲ್ಲ ಹೊಸ ತಂಡ ಮಾಡುತ್ತಿದ್ದೇವೆ. ಹೇಳಲು ಹೋಗಬೇಡಿ. ಈಗ ಸದ್ಯಕ್ಕೆ ಯಾರಿಗೂ ಕೊಡಬೇಡಿ ಅಂದಿದ್ದಾರೆ...

(ನಗು)..

ಇಲ್ಲ. ಯಾರಿಗೂ ಹೇಳಬೇಡಿ. ಬೇಡ. ಹೂಂ... ಏನೂ ತೊಂದರೆ ಇಲ್ಲ.

ಯಾರಿಗೂ ಹೆದರಬೇಡಿ. ಯಾರಾದರೂ ಸರಿ ಇನ್ನು ನಮ್ಮ ಕೈಯಲ್ಲೇ ಎಲ್ಲ. ಮೂರು ಹೆಸರುಗಳು ಇವೆ. ಅದರಲ್ಲಿ ಯಾವುದಾದರೂ ಆಗುವ ಸಾಧ್ಯತೆಗಳಿವೆ.

ಇಲ್ಲ.. ಇಲ್ಲ. ಇಲ್ಲಿಂದ ಯಾರನ್ನೂ ಮಾಡುವುದಿಲ್ಲ. ದೆಹಲಿಯಿಂದಲೇ ಹಾಕುತ್ತಾರೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.