
ಮಂಗಳೂರು: ಪಶ್ಚಿಮ ಘಟ್ಟ ಪರ್ವತ ಪ್ರದೇಶವಾದ ಕೊಡಗು ಜಿಲ್ಲೆಯ ಸಂಪಾಜೆ ಮತ್ತು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಸೂಜಿದುಂಬಿಯ ಹೊಸ ಪ್ರಭೇದವನ್ನು ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಸಂಪಾಜೆ ನದಿ ತೀರದಲ್ಲಿ ಹಾಗೂ ಆಗುಂಬೆಯ ಹಿಮಾಚ್ಛಾದಿತ ಗುಡ್ಡದಲ್ಲಿ ಈ ದುಂಬಿಗಳು ಕಂಡುಬಂದಿವೆ ಎಂದು ಜೀವವಿಜ್ಞಾನಿಗಳ ತಂಡ ತಿಳಿಸಿದೆ.
ದುಂಬಿಗಳು ಮತ್ತು ಸೂಜಿದುಂಬಿಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಕೇರಳದ ತಲಶ್ಶೇರಿ ಬ್ರನ್ನನ್ ಕಾಲೇಜು ಪ್ರಾಣಿವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೂಲಿಕುನ್ನು ಮಹಮ್ಮದ್ ಹನೀಫ್ ಅವರು, ಶತಮಾನದ ಹಿಂದೆ ಸಂಪಾಜೆಯಲ್ಲಿ ತಂಗಿದ್ದ ಬ್ರಿಟಿಷ್ ಸೇನೆಯ ವೈದ್ಯ ಫ್ರೇಜರ್ ಉಲ್ಲೇಖಿಸಿದ್ದ ಚಿಟ್ಟೆಗಳ ಬಗ್ಗೆ ತಿಳಿಯಲು ಹೋಗಿದ್ದ ಸಂದರ್ಭದಲ್ಲಿ ಈ ದುಂಬಿಂಗಳು ಪತ್ತೆಯಾಗಿವೆ. ನೆರಳಿನಲ್ಲಿ ಬದುಕುವ ಇವುಗಳನ್ನು ಕೊಡಗಿನ ಛಾಯಾ ಸುಂದರಿ (ಕೊಡಗು ಶ್ಯಾಡೊ ಡ್ಯಾಮ್ಸೆಲ್) ಎಂದು ಕರೆಯಲಾಗಿದೆ. ಮಂಗಳೂರು ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದ ವಿಜ್ಞಾನಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ಎಚ್.ಸೂರ್ಯಪ್ರಕಾಶ್ ಶೈಣೈ ಅವರ ಸ್ಮರಣಾರ್ಥ ಪ್ರೋಟೊಸ್ಟಿಕ್ಟಾ ಸೂರ್ಯಪ್ರಕಾಶಿ ಎಂಬ ಹೆಸರು ಇರಿಸಲಾಗಿದೆ.
ಇಂಡಿಯನ್ ಫೌಂಡೇಷನ್ ಫಾರ್ ಬಟರ್ಫ್ಲೈ ಟ್ರಸ್ಟ್ ಸದಸ್ಯ, ಮಹಾರಾಷ್ಟ್ರದ ದತ್ತಪ್ರಸಾದ್ ಸಾವಂತ್ ಅವರಿಗೆ ವರ್ಷದ ಹಿಂದೆ ಆಗುಂಬೆಯಲ್ಲಿ ವಿಶಿಷ್ಟ ಪ್ರಭೇದದ ದುಂಬಿಗಳು ಲಭಿಸಿದ್ದವು. ಅದರ ಬಗ್ಗೆ ಸಂಶೋಧನೆಗೆ ಮುಂದಾಗಿರಲಿಲ್ಲ. ಸಂಪಾಜೆಯಲ್ಲಿ ಲಭಿಸಿದ ದುಂಬಿಯ ಅಧ್ಯಯನದ ಸಂದರ್ಭದಲ್ಲಿ, ಆಗುಂಬೆಯಲ್ಲಿ ಲಭಿಸಿದ್ದು ಕೂಡ ಅದೇ ತಳಿ ಎಂಬುದು ಖಾತರಿಯಾಗಿದೆ. ಬೆಂಗಳೂರಿನ ಜೈವಿಕ ವಿಜ್ಞಾನದ ರಾಷ್ಟ್ರೀಯ ಸಂಶೋಧನಾ ಕೇಂದ್ರದ ಸಂಶೋಧಕ ಕೃಷ್ಣಮೇಘ ಕುಂಟೆ, ಪುಣೆ ಎಂಐಟಿ ವರ್ಲ್ಡ್ ಪೀಸ್ ಯುನಿವರ್ಸಿಟಿಯ ಪ್ರಾಧ್ಯಾಪಕ ಪಂಕಜ್ ಘೋರ್ಪಡೆ, ಮಹಮ್ಮದ್ ಹನೀಫ್ ಅವರ ಪತ್ನಿ, ಡಿಎನ್ಎ ಸಂಶೋಧನಾ ತಜ್ಞೆ ಮೈಮೂನತ್ ಬೀವಿ ಮತ್ತು ಕೇರಳದ ತ್ರಿಶೂರ್ ಕೃಷಿ ವಿವಿ ಅರಣ್ಯ ಕಾಲೇಜು ಪ್ರಾಧ್ಯಾಪಕ ವಿವೇಕ್ ಚಂದ್ರನ್ ಸಂಶೋಧನೆಯಲ್ಲಿ ಭಾಗಿಯಾಗಿದ್ದರು.
‘ನೆರಳಿನಲ್ಲಿ ಬುದುಕುವ ಸೂಜಿದುಂಬಿಯ 18 ತಳಿಗಳು ಪಶ್ಚಿಮ ಘಟ್ಟದಲ್ಲಿ ಈಗಾಗಲೇ ಪತ್ತೆಯಾಗಿವೆ. ಕೊಡಗಿನ ಛಾಯಾ ಸುಂದರಿ ಎಂಬ ಪ್ರಭೇದದ ದುಂಬಿಗಳು ಮೇ ತಿಂಗಳಿಂದ ಜುಲೈ ವರೆಗೆ ಹೆಚ್ಚಾಗಿ ಕಂಡುಬರುತ್ತವೆ. ನಾನು ಈ ವರ್ಷದ ಮೇ 23ರಂದು ಸಂಪಾಜೆಗೆ ಹೋಗಿದ್ದಾಗ ಕಣ್ಣಿಗೆ ಬಿದ್ದಿದ್ದವು. ಸಂಶೋಧನೆ, ಚರ್ಚೆಯ ಬಳಿಕ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಡಿಎನ್ಎ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯಿತು. ತಜ್ಞರ ಅಭಿಪ್ರಾಯ ಸಿಕ್ಕಿದ ನಂತರ ನ್ಯೂಜಿಲೆಂಡ್ನಿಂದ ಪ್ರಕಟವಾಗುವ ಜರ್ನಲ್ ಆಫ್ ಝೂ ಟ್ಯಾಕ್ಸದಲ್ಲಿ ಡಿಸೆಂಬರ್ನಲ್ಲಿ ಲೇಖನ ಪ್ರಕಟಗೊಂಡಿದೆ’ ಎಂದು ಮಹಮ್ಮದ್ ಹನೀಫ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬ್ರನ್ನನ್ ಕಾಲೇಜಿನ ಸಸ್ಯವಿಜ್ಞಾನ ವಿಭಾಗ, ಕೋಟಯಂನ ಸೊಸೈಟಿ ಫಾರ್ ಒಡೊನೇಟ್ ಸ್ಟಡೀಸ್, ಕೇರಳ ಕೃಷಿ ವಿವಿಯ ವನ್ಯಜೀವಿ ವಿಭಾಗ, ಬೆಂಗಳೂರು ಕೊಡಿಗೆಹಳ್ಳಿಯ ಇಂಡಿಯನ್ ಫೌಡೇಷನ್ ಫಾರ್ ಬಟರ್ಫ್ಲೈಸ್ ಟ್ರಸ್ಟ್, ಸಿಂದುದುರ್ಗದ ಗ್ರಾಸ್ ಜೆವೆಲ್ ಸೊಲ್ಯೂಷನ್ಸ್ ಆ್ಯಂಡ್ ಶಾಕಾಂಬರಿ ಕ್ಲಿನಿಕ್, ಪುಣೆಯ ಎಂಐಟಿ ವರ್ಲ್ಡ್ ಪೀಸ್ ಯುನಿವರ್ಸಿಟಿಯ ಪರಿಸರ ವಿಭಾಗಗಳಲ್ಲಿ ಸಂಶೋಧನೆಯ ಪ್ರಕ್ರಿಯೆ ನಡೆದಿದೆ.
‘ಕೊಡಗಿನ ಛಾಯಾ ಸುಂದರಿ’ಯರು ಉತ್ತಮ ಪರಿಸರ ಇದ್ದಲ್ಲಿ ಮಾತ್ರ ಬದುಕುತ್ತವೆ. ಶುದ್ಧನೀರಿಗೆ ಮಾತ್ರ ಮೈಯೊಡ್ಡುತ್ತವೆ. ಸೊಳ್ಳೆ ಮತ್ತು ಸಣ್ಣ ಕೀಟಗಳನ್ನು ತಿನ್ನುತ್ತವೆ. ಆದ್ದರಿಂದ ನೆರಳಿರುವಲ್ಲಿ ಮಾತ್ರ ಇರುತ್ತವೆ. ಇವುಗಳು ಇದ್ದಲ್ಲಿ ಪರಿಸರ ಮಲಿನ ಆಗಿಲ್ಲ ಎಂಬುದನ್ನು ಖಚಿತಪಡಿಸಬಹುದಾಗಿದೆ. ಈ ದುಂಬಿಗಳ ಸಂಖ್ಯೆ ಕಡಿಮೆಯಾದರೆ ಪರಿಸರದ ಸಮತೋಲನ ತಪ್ಪಿದೆ ಎಂಬುದನ್ನು ಊಹಿಸಬಹುದು. ಆದ್ದರಿಂದ ಇವುಗಳನ್ನು ಪರಿಸರದ ಸೂಚಕಗಳೆಂದು ಕರೆಯಬಹುದಾಗಿದೆ ಎಂದು ಮಹಮ್ಮದ್ ಹನೀಫ್ ವಿವರಿಸಿದರು.
ಸಂಪಾಜೆಯಲ್ಲಿ ಹೊಸ ಬಗೆಯ ದುಂಬಿಯನ್ನು ಕಂಡ ನಂತರ ದುಂಬಿಗಳ ಬಗ್ಗೆ ಅಪಾರ ಜ್ಞಾನವುಳ್ಳ ವಿವೇಕ್ ಚಂದ್ರನ್ ಅವರನ್ನು ಕರೆದುಕೊಂಡು ಹೋದೆ. ಇದು ಹೊಸ ಸಂಶೋಧನೆಗೆ ಹಾದಿಯೊದಗಿಸಿತು.ಮುಹಮ್ಮದ್ ಹನೀಫ್, ಸಹಾಯಕ ಪ್ರಾಧ್ಯಾಪಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.