ADVERTISEMENT

NIA | ರಾಜ್ಯದಲ್ಲಿ 17 ಪ್ರಕರಣ: 124 ಮಂದಿ ಜೈಲುಗಳಲ್ಲಿ, ಖುಲಾಸೆಯಾಗದ ಆರೋಪಿಗಳು

ಬಿ.ಎಸ್.ಷಣ್ಮುಖಪ್ಪ
Published 13 ಏಪ್ರಿಲ್ 2023, 22:30 IST
Last Updated 13 ಏಪ್ರಿಲ್ 2023, 22:30 IST
   

ಬೆಂಗಳೂರು: ರಾಜ್ಯದ ವಿವಿಧೆಡೆ ನಡೆದಿರುವ ಹಲವು ಗುರುತರ ಅಪರಾಧಿಕ ಪ್ರಕರಣಗಳನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಖಲಿಸಿರುವ 17 ಪ್ರಕರಣಗಳಲ್ಲಿನ 43 ಅಪರಾಧಿಗಳಲ್ಲಿ ಯಾವೊಬ್ಬ ಆರೋಪಿಯೂ ಈತನಕ ಖುಲಾಸೆಯಾಗಿಲ್ಲ.

ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಎನ್‌ಐಎ, ‘ಕೆಲವು ಕ್ಲಿಷ್ಟಕರ ಪ್ರಕರಣಗಳಲ್ಲಿನ ಆರೋಪಿಗಳು ತಮ್ಮ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಭೆಗಳನ್ನು ನಡೆಸಲು ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ’ ಎಂಬ ಅಂಶವನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಸಂಬಂಧದ ಕ್ರೋಡೀಕೃತ ಅಂಕಿಅಂಶಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ‘ರಾಜ್ಯದಲ್ಲಿ ನಡೆದಿರುವ ಹಲವಾರು ಪ್ರಕರಣಗಳಲ್ಲಿನ ಒಟ್ಟು 124 ಆರೋಪಿಗಳನ್ನು ಬೆಂಗಳೂರು ಕೇಂದ್ರ ಕಾರಾಗೃಹ, ತಿಹಾರ್ ಜೈಲು, ಸೇಲಂ ಕೇಂದ್ರ ಕಾರಾಗೃಹ, ಚೆನ್ನೈ ಕೇಂದ್ರ ಕಾರಾಗೃಹ, ಕೋಲ್ಕತ್ತ ಪ್ರೆಸಿಡೆನ್ಸಿ ಜೈಲು, ಕೋಲ್ಕತ್ತ ಡಂಡಂ ಜೈಲು ಸೇರಿದಂತೆ ದೇಶದ ವಿವಿಧ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ’ ಎಂಬ ಅಂಶ ವ್ಯಕ್ತವಾಗಿದೆ.

ADVERTISEMENT

ಒಟ್ಟು ಪ್ರಕರಣಗಳಲ್ಲಿ 222 ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ-1860ರ ವಿವಿಧ ಕಲಂಗಳಡಿ ಜಾಮೀನು ದೊರೆತಿದ್ದರೆ, ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆ) ಕಾಯ್ದೆ-1967ರ ವಿವಿಧ ಕಲಂಗಳ ಅಡಿಯಲ್ಲಿನ ಯಾವೊಬ್ಬ ಆರೋಪಿಗೂ ಜಾಮೀನು ದೊರೆತಿಲ್ಲ. ವಿವಿಧ ಪ್ರಕರಣಗಳಲ್ಲಿ ಒಟ್ಟು 19 ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇವರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರುದ್ರೇಶ್ ಹತ್ಯೆ ಪ್ರಕರಣದ ಆರನೇ ಆರೋಪಿ ಮೊಹಮದ್ ಗೌಸ್ ನಯಾಜಿ ಅಲಿಯಾಸ್ ಗೌಸ್ ಭಾಯ್ ಅಲಿಯಾಸ್ ಗೌಸ್ ಈತನಕವೂ ತಲೆಮರೆಸಿಕೊಂಡಿರುವುದು ಗಮನಾರ್ಹ.

ಈ ಕುರಿತಂತೆ ವಿವರಿಸಿರುವ ಕರ್ನಾಟಕದ ಎನ್ಐಎ ಪರ ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ವಿವಿಧ ಪ್ರಕರಣ ಗಳಲ್ಲಿ 13 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಯುಎಪಿಎ ಕಾಯ್ದೆ ಅಡಿಯಲ್ಲಿನ 247 ಅರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘2020ರ ಆಗಸ್ಟ್‌ನಲ್ಲಿ ನಡೆದಿದ್ದ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆ ಅಡಿಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಎನ್‌ಐಎ, ಒಟ್ಟು 480 ಶಂಕಿತರನ್ನು ಬಂಧಿಸಿತ್ತು’ ಎಂದು ತಿಳಿಸಿದ್ದಾರೆ.

‘ಎಲ್ಇಟಿ- ಬೆಂಗಳೂರು ಮಾಡ್ಯೂಲ್ ಪ್ರಕರಣದಲ್ಲಿ ನಡೆಸಲಾಗಿರುವ ತನಿಖೆಯಲ್ಲಿ, ಎನ್ಐಎ 17 ವ್ಯಕ್ತಿಗಳನ್ನು ಬಂಧಿಸಿದ್ದು ಅವರ ವಿರುದ್ಧವೂ ದೋಷಾರೋಪ ಹೊರಿಸಲಾಗಿದೆ’ ಎಂದು ಹೇಳಿದ್ದಾರೆ.

ಪ್ರಕರಣಗಳ ವಿವರ

ರಾಜ್ಯದಲ್ಲಿ ಎನ್‌ಐಎ ದಾಖಲಿಸಿರುವ ಪ್ರಕರಣಗಳು:

ಲ್ಇಟಿ- ಬೆಂಗಳೂರು ಮಾಡ್ಯೂಲ್ ಪ್ರಕರಣ, ಚರ್ಚ್ ಸ್ಟ್ರೀಟ್ ಸ್ಫೋಟ, ರುದ್ರೇಶ್ ಹತ್ಯೆ, ಬೆಂಗಳೂರು ಎಫ್ಐಸಿಎನ್ (ಫೇಕ್ ಇಂಡಿಯನ್ ಕರೆನ್ಸಿ ನೋಟ್), ಚಿಕ್ಕೋಡಿ ಎಫ್ಐಸಿಎನ್, ಜೆಎಂಬಿ (ಜಮಾತ್ ಉಲ್ ಮುಜಾಹಿದೀನ್‌ ಬಾಂಗ್ಲಾದೇಶ್), ಐಎಸ್ಐಎಸ್ ಅಲ್ ಹಿಂದ್, ಜೆಎಂಬಿ ಡಕಾಯಿತಿ, ಐಎಸ್ಐಎಸ್ ಮತ್ತು ಐಎಸ್‌ಕೆಪಿ (ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾವಿನ್ಸ್), ಡಿಜೆ ಹಳ್ಳಿ-ಕೆಜಿ ಹಳ್ಳಿ ಪ್ರಕರಣ, ಮಾನವ ಕಳ್ಳಸಾಗಣೆ ಬಾಂಗ್ಲಾದೇಶ, ಮಾನವ ಕಳ್ಳಸಾಗಣೆ ಶ್ರೀಲಂಕಾ, ಹರ್ಷ ಹತ್ಯೆ, ಪ್ರವೀಣ್ ನೆಟ್ಟಾರು ಹತ್ಯೆ, ಅಲ್ ಕೈದಾ ಪ್ರಕರಣ, ಶಿವಮೊಗ್ಗ ಐಎಸ್ ಸಂಚು, ಮಂಗಳೂರು ಕುಕ್ಕರ್ ಸ್ಫೋಟ ಮತ್ತು ಅಲ್ ಕೈದಾ ಹಾಗೂ ಟಿಟಿಪಿ (ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ್) ಪ್ರಕರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.