ADVERTISEMENT

ಕೋಲಾರದ ಮೂರು ಕೆರೆ ಕಾಮಗಾರಿ ವೀಕ್ಷಿಸಿದ ನಿರ್ಮಲಾ: ಕೆಲಸ ಸರಿಯಿಲ್ಲವೆಂದು ಗರಂ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 7:04 IST
Last Updated 30 ಸೆಪ್ಟೆಂಬರ್ 2022, 7:04 IST
   

ಕೋಲಾರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಅಮೃತಯೋಜನಾ ಅಡಿಯಲ್ಲಿ ಅಭಿವೃಧಿಪಡಿಸುತ್ತಿರುವ ಕೆರೆ ಕಾಮಗಾರಿ ಪರಿಶೀಲನೆ ನಡೆಸಿದರು.

ಬಂಗಾರಪೇಟೆ ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಕೆರೆ, ಕೆಜಿಎಫ್‌ ತಾಲ್ಲೂಕಿನ ಘಟ್ಟಕಾಮಧೇನಹಳ್ಳಿ ಗ್ರಾಮ ಪಂಚಾಯಿತಿಯ ಪೆದ್ದಪಲ್ಲಿ ಕೆರೆ ಹಾಗೂ ಕೋಲಾರ ತಾಲ್ಲೂಕಿನ ಮುದುವತ್ತಿ ಗ್ರಾಮ ಪಂಚಾಯಿತಿಯ ಶೆಟ್ಟಿಕೊತ್ತನೂರು ಕೆರೆ ಕಾಮಗಾರಿ ಪರಿಶೀಲನೆ ನಡೆಸಿದರು.

'ಕೆರೆ ಕಾಮಗಾರಿ ಸ್ವರೂಪ ಸರಿ ಇಲ್ಲ. ಬೌಂಡರಿಯನ್ನೂ ಹಾಕಿಲ್ಲ‌. ಒತ್ತುವರಿ ಆಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪಕ್ಕದಲ್ಲಿ ಜಮೀನು ಇದೆ. ಕೆರೆ ಯಾವುದು, ಜಮೀನು ಯಾವುದು ಎಂಬುದು ಗೊತ್ತಾಗಲ್ಲ' ಎಂದು ಹರಿಹಾಯ್ದರು.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಡಿ ಕೆರೆ ಅಭಿವೃದ್ಧಿಪಡಿಸಲಾಗಿದೆ.

ADVERTISEMENT

ಮಹಾತ್ಮ ಗಾಂಧಿ ನರೇಗಾ ಯೋಜನೆಯಿಂದ ₹ 15.56 ಕೋಟಿ ಅನುದಾನ, ಸಂಸದರ (ನಿರ್ಮಲಾ ಸೀತಾರಾಮನ್‌) ₹ 1.83 ಕೋಟಿ ಅನುದಾನ ಹಾಗೂ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್ಆರ್) ₹ 6.14 ಕೋಟಿ ಅನುದಾನದಿಂದ ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿತ್ತು.

ಈ ವರ್ಷದ ಏಪ್ರಿಲ್‌ 23ರಂದು ನಡೆದ ಪಂಚಾಯತ್‌ ರಾಜ್‌ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಮಿಷನ್‌ ಅಮೃತ ಸರೋವರ’ಕ್ಕೆ ಚಾಲನೆ ನೀಡಿದ್ದರು. 2023ರ ಆ.15ರವರೆಗೂ ಈ ಯೋಜನೆ ಜಾರಿಯಲ್ಲಿರುತ್ತದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 75 ಕೆರೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.