ಬೆಂಗಳೂರು: ‘2022ರ ಒಳಗೆ ಎಲ್ಲರಿಗೂ ಸೂರು ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ರಾಜ್ಯದಲ್ಲಿಯೂ ಈ ಯೋಜನೆಯಡಿ ಬಡವರಿಗೆ ಸೂರು ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿಯು (ನರೆಡ್ಕೊ) ನಗರದಲ್ಲಿ ಬುಧವಾರ ಆಯೋಜಿಸಿದ್ದ 'ಕರ್ನಾಟಕ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಪ್ರವಾಹದಿಂದಾಗಿ ಅಸಂಖ್ಯ ಜನರು ಸೂರು ಕಳೆದುಕೊಂಡು ಅತಂತ್ರರಾಗಿದ್ದಾರೆ. ಅವರೆಲ್ಲರಿಗೂ ಸೂರು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಲಹೆಗಳನ್ನು ನೀಡಬಹುದು’ ಎಂದರು.
‘ನಗರಾಭಿವೃದ್ಧಿ ಇಲಾಖೆಯ ಅನುಮತಿ ಸಿಗದೇ500 ಯೋಜನೆಗಳು ಕಾರ್ಯಾರಂಭ ಮಾಡಿಲ್ಲ. ಈ ಯೋಜನೆಗಳಿಗೆ ಅನುಮತಿ ನೀಡಿದರೆ ರಾಜ್ಯದಲ್ಲಿ ಕೈಗೆಟುಕುವ ಮನೆಗಳ ನಿರ್ಮಾಣಕ್ಕೆ ಉತ್ತೇಜನ ಸಿಗಲಿದೆ’ ಎಂದು ನರೆಡ್ಕೊ ಅಧ್ಯಕ್ಷ ನಿರಂಜನ ಹೀರಾನಂದಾನಿ ಅವರು ಅಭಿಪ್ರಾಯಪಟ್ಟರು.
‘ನಾನಾ ಕಾರಣಗಳಿಂದಾಗಿ ನಗರಾಭಿವೃದ್ಧಿ ಮತ್ತು ರೆವಿನ್ಯೂ ಇಲಾಖೆಯ ಅನುಮತಿ ಸಿಗದೆ ಇರುವ ಹಲವು ಯೋಜನೆಗಳಿವೆ. ಇವೆಲ್ಲಕ್ಕೂ ಅನುಮತಿ ದೊರೆತರೆ ‘ಎಲ್ಲರಿಗೂ ಸೂರು’ ಉದ್ದೇಶ ಸಾಕಾರವಾಗಲು ಮತ್ತು ಉದ್ಯೋಗ ಅವಕಾಶ ಹೆಚ್ಚಿಸಲು ಸಾಧ್ಯವಾಗಲಿದೆ. ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿಯೇ ಯೋಜನೆಗಳಿಗೆ ಅನುಮತಿ ನೀಡುವ ಕ್ರಮ ಜಾರಿಗೆ ತರಬೇಕು’ ಎಂದು ಅವರು ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.ಆದ್ಯತೆ ಮೇರೆಗೆ ಯೋಜನೆಗಳಿಗೆ ಅನುಮತಿ ದೊರೆಯುವಂತೆ ಮಾಡುವುದಾಗಿ ಯಡಿಯೂರಪ್ಪ ಅವರು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.