ADVERTISEMENT

ವಿಧಾನಸೌಧದ ಆವರಣದಲ್ಲಿರುವ ಬೀದಿ ನಾಯಿಗಳ ಸ್ಥಳಾಂತರ ಇಲ್ಲ: ಖಾದರ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 20:05 IST
Last Updated 4 ಫೆಬ್ರುವರಿ 2025, 20:05 IST
<div class="paragraphs"><p>ಯು.ಟಿ ಖಾದರ್‌</p></div>

ಯು.ಟಿ ಖಾದರ್‌

   

ಬೆಂಗಳೂರು: ವಿಧಾನಸೌಧದ ಆವರಣದಲ್ಲಿರುವ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡದಂತೆ ತಜ್ಞರ ಸಮಿತಿ ಸೂಚಿಸಿದೆ. ಆದ್ದರಿಂದ ಇದೇ ಆವರಣದಲ್ಲಿ ನಾಯಿಗಳಿಗೆ ಆಶ್ರಯತಾಣ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದ್ದಾರೆ.

ತಜ್ಞರ ಸಮಿತಿಯ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಿಧಾನಸೌಧ ಮತ್ತು ವಿಕಾಸಸೌಧಗಳನ್ನು ರಾತ್ರಿ ವೇಳೆ ಬೀದಿ ನಾಯಿಗಳೇ ಕಾವಲು ಕಾಯುತ್ತಿವೆ. ಇಲ್ಲೇ ಉಳಿಸಿಕೊಳ್ಳುವುದು ಸೂಕ್ತ’ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ ಎಂದರು.

ADVERTISEMENT

‘ವಿಧಾನಸೌಧದ ಆವರಣದಲ್ಲಿರುವ ನಾಯಿಗಳ ಹಾವಳಿ ತಪ್ಪಿಸಲು ತಜ್ಞರ ಸಮಿತಿಯಿಂದ ವರದಿ ಕೇಳಲಾಗಿತ್ತು. ಇವತ್ತಿನ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲೇ ಉಳಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆಶ್ರಯತಾಣದ ನಿರ್ವಹಣೆಯನ್ನು ಪ್ರಾಣಿ ದಯಾ ಸಂಘಕ್ಕೆ ಒಪ್ಪಿಸುವ ಬಗ್ಗೆ ಚರ್ಚೆ ನಡೆಯಿತು’ ಎಂದರು.

ಸಭೆಯಲ್ಲಿ ನಡೆದ ಚರ್ಚೆ:

‘ವಿಧಾನಸೌಧ ಮತ್ತು ವಿಕಾಸಸೌಧದ ವ್ಯಾಪ್ತಿಯಲ್ಲಿ 54 ನಾಯಿಗಳು ಇವೆ. ಇಲ್ಲಿ ವಾಕಿಂಗ್ ಮಾಡುವವರಿಗೆ ಮತ್ತು ವಿಧಾನಸೌಧ ನೋಡಲು ಬರುವ ಮಕ್ಕಳಿಗೆ ಭಯ ಆಗುತ್ತದೆ. ಆದ್ದರಿಂದ, ನಾಯಿಗಳನ್ನು ಬೇರೆಡೆ ಸಾಗಿಸಬೇಕು ಎಂಬ ವಿಚಾರವಾಗಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಯಿತು’ ಎಂದು ಅವರು ತಿಳಿಸಿದರು.

‘ನಾಯಿಗಳನ್ನು ಇರಲು ಬಿಡುವುದೇ ಸೂಕ್ತ ಎಂಬ ಅಭಿಪ್ರಾಯ ಹೆಚ್ಚಿನವರದ್ದಾಗಿತ್ತು. ಅವುಗಳಿಗೆ ಆಶ್ರಯ ತಾಣ ಮಾಡಿಕೊಡಲು ಲೋಕೋಪಯೋಗಿ ಇಲಾಖೆಗೆ ಹೇಳಿದರಾಯಿತು. ಮಳೆ–ಬಿಸಿಲು ಇದ್ದಾಗ ಅಲ್ಲಿಗೆ ಬಂದು ರಕ್ಷಣೆ ಪಡೆಯುತ್ತವೆ’ ಎಂದು ಖಾದರ್‌ ಹೇಳಿದರು.

ವಿಧಾನಸೌಧ ಮತ್ತು ವಿಕಾಸಸೌಧ ಆವರಣದಲ್ಲಿ ಇಲಿಗಳನ್ನು ಹಿಡಿಯಲು ₹8 ಲಕ್ಷ ಟೆಂಡರ್‌ ಕೊಟ್ಟ ವಿಚಾರ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಆ ವಿಚಾರ ನನಗೆ ಗೊತ್ತಿಲ್ಲ. ಸಮಸ್ಯೆ ಬಗೆ ಹರಿಯಬೇಕು ಅಷ್ಟೆ. ಹಣದ ಸಮಸ್ಯೆ ಇಲ್ಲ, ನಮಗೆ ಸಮಸ್ಯೆ ಬಗೆಹರಿಯಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.