ADVERTISEMENT

ಇಂದಿರಾ ಕ್ಯಾಂಟೀನ್‌ ತೆರೆಯದೇ ಇರಲು ನಿರ್ಧಾರ: ಸಿಎಂ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 4:15 IST
Last Updated 24 ಮಾರ್ಚ್ 2020, 4:15 IST
   

ಬೆಂಗಳೂರು:ನೂಕು ನುಗ್ಗಲು ಸಂಭವಿಸುವ ಆತಂಕ ಇರುವ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯದೇ ಇರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ರಾಜ್ಯದ ಜನತೆ ಸರಳವಾಗಿ ತಮ್ಮ ಮನೆಯಲ್ಲೇ ಯುಗಾದಿ ಹಬ್ಬ ಆಚರಿಸಬೇಕು. ಇಂದಿರಾ ಕ್ಯಾಂಟಿನ್ ತೆರೆಯದಿರಲು ನಿರ್ಧಾರ ಮಾಡಿದ್ದೇವೆ. ಜನಸಂದಣಿ ಹೆಚ್ಚುವ ಭೀತಿಯಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ‌ಜನ ಸರ್ಕಾರದ ಜತೆ ಸಹಕರಿಸಬೇಕು. ನಿಯಮ‌ ಉಲ್ಲಂಘಿಸಿದರೆ ಪೊಲೀಸರು ಕಠಿಣ ಕ್ರಮ‌ ಜರುಗಿಸಲಿದ್ದಾರೆ. ಇದು ಅನಿವಾರ್ಯ,’ ಎಂದರು. ‌

‘ಲಾಕ್‌ ಡೌನ್ಗೆ ನಾಗರಿಕರು ಸಹಕರಿಸುವ ಅಗತ್ಯವಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತೇವೆ. ಜನರು ಆತಂಕಪಡುವ ಅವಶ್ಯಕತೆ ಇಲ್ಲ,’ ಎಂದು ಹೇಳಿದರು.

ADVERTISEMENT

‘31ರವರೆಗೆ ಯಾರೂ ಮನೆಯಿಂದ ಹೊರ ಬರಬೇಡಿ. ಪೊಲೀಸರು ಕ್ರಮ ಕೈಗೊಂಡರೆ ಸರ್ಕಾರವನ್ನು ದೂಷಿಸಬೇಡಿ,’ ಎಂದು ಬಿಎಸ್‌ವೈ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಾಲು ಮತ್ತು ದಿನಸಿ ಪದಾರ್ಥ ದರ ಹೆಚ್ಚಳ ಮಾಡಿ ಶೋಷಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನೂ ಅವರು ನೀಡಿದರು.

ಅಂತಾರಾಷ್ಟ್ರೀಯ ದೇಶೀಯ ವಿಮಾನ ಹಾರಾಟ ನಿಲ್ಲಿಸಲಾಗಿದೆ ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಬೇಕು. ಜನ ಈ ಬಗ್ಗೆ ಉದಾಸೀನ ಮಾಡದೆ, ಅನಗತ್ಯವಾಗಿ ಕಾರಿನಲ್ಲಿ, ಸ್ವಂತ ವಾಹನದಲ್ಲಿ ಓಡಾಟ ಮಾಡಬಾರದು ಎಂದೂ ಸಿಎಂ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.