ಬೋಧನೆ
ಚಿತ್ರದುರ್ಗ: ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಬೋಧನೆಗಾಗಿ ರಾಜ್ಯ ಸರ್ಕಾರ ಸೃಷ್ಟಿಸಿದ್ದ 3,567 ವಿಶೇಷ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದರೂ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳದ ಕಾರಣ ಸಾಮಾನ್ಯ ಶಾಲೆಗಳಿಗೆ ದಾಖಲಾಗಿರುವ ಅಂಗವಿಕಲ ವಿದ್ಯಾರ್ಥಿಗಳ ಕಲಿಕೆ ಸ್ಥಗಿತಗೊಂಡಿದೆ.
ಅಂಗವಿಕಲರ ಹಕ್ಕುಗಳ ಕಾಯ್ದೆ- 2016ರ ಅನ್ವಯ ಸಾಮಾನ್ಯ ಶಾಲೆಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳೂ ಕಲಿಯಬೇಕು. ತಾರತಮ್ಯವಿಲ್ಲದ ಸಮನ್ವಯ ಶಿಕ್ಷಣ ಜಾರಿಯಾಗಬೇಕು. ವೈಕಲ್ಯದ ಆಧಾರದ ಮೇಲೆ ಪಾಠ ಬೋಧನೆ ಮಾಡುವ ವಿಶೇಷ ತರಬೇತಿ ಪಡೆದ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು 2021ರಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ರಾಜ್ಯದಲ್ಲಿ 1ರಿಂದ 12ನೇ ತರಗತಿವರೆಗೆ 43,719 ಅಂಗವಿಕಲ ವಿದ್ಯಾರ್ಥಿಗಳು ಸಾಮಾನ್ಯ ಶಾಲೆಗೆ ದಾಖಲಾಗಿದ್ದಾರೆ. 10 ವಿದ್ಯಾರ್ಥಿಗಳಿಗೆ ಒಬ್ಬರಂತೆ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಡಾವಳಿ ರೂಪಿಸಿದ್ದ ಸರ್ಕಾರ 3,567 ವಿಶೇಷ ಶಿಕ್ಷಕರ ಹುದ್ದೆ ಸೃಷ್ಟಿಸಿದೆ. 2024ರ ಜ.17ರಂದು ಆರ್ಥಿಕ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದೆ. ಈ ಕುರಿತು ಈಗಾಗಲೇ ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರವನ್ನೂ ಸಲ್ಲಿಸಲಾಗಿದೆ.
ಆದರೆ, ಇಲ್ಲಿಯವರೆಗೆ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದ ಕಾರಣ ಅಂಗವಿಕಲ ವಿದ್ಯಾರ್ಥಿಗಳ ಶಿಕ್ಷಣ ನನೆಗುದಿಗೆ ಬಿದ್ದಿದೆ. ಆ ಮೂಲಕ ಸುಪ್ರೀಂ ಕೋರ್ಟ್ನ ಆದೇಶವನ್ನೂ ಉಲ್ಲಂಘಿಸಲಾಗಿದೆ ಎಂದು ವಿಶೇಷ ಶಿಕ್ಷಣ ಪದವಿ ಪಡೆದ ಅಭ್ಯರ್ಥಿಗಳು ಆರೋಪಿಸುತ್ತಾರೆ.
ತಾಲ್ಲೂಕಿಗೆ ನಾಲ್ವರೇ ಶಿಕ್ಷಕರು
ರಾಜ್ಯ ಸರ್ಕಾರ 2018ರಲ್ಲೇ ನೇರಗುತ್ತಿಗೆ ಆಧಾರದ ಮೇಲೆ 836 ವಿಶೇಷ ಶಿಕ್ಷಕರ ನೇಮಕಾತಿ ಮಾಡಿಕೊಂಡಿತ್ತು. ಬಿಆರ್ಸಿ (ಸಮನ್ವಯ ಶಿಕ್ಷಣ ವಿಭಾಗ) ಹಂತದಲ್ಲಿ ಪ್ರತಿ ತಾಲ್ಲೂಕಿನ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ ತಲಾ ಇಬ್ಬರು ಶಿಕ್ಷಕರನ್ನು ಮಾತ್ರ ನಿಯೋಜನೆ ಮಾಡಲಾಗಿತ್ತು. ಕಡಿಮೆ ವೇತನದ ಕಾರಣಕ್ಕೆ ಹೆಚ್ಚಿನ ಶಿಕ್ಷಕರು ಈಗ ಕೆಲಸ ಬಿಟ್ಟಿದ್ದಾರೆ.
ಕೆಲ ತಾಲ್ಲೂಕುಗಳಲ್ಲಿ ಒಬ್ಬ ವಿಶೇಷ ಶಿಕ್ಷಕರೂ ಇಲ್ಲವಾಗಿದ್ದಾರೆ. ಇರುವ ಕೆಲವೇ ಶಿಕ್ಷಕರು ಅಂಗವಿಕಲ ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಗಳ ಭೇಟಿಗಷ್ಟೇ ಸೀಮಿತವಾಗಿದ್ದಾರೆ. ಕೇವಲ ನಾಲ್ವರು ಶಿಕ್ಷಕರು ತಾಲ್ಲೂಕಿನ ವಿವಿಧ ಶಾಲೆಗಳಲ್ಲಿರುವ 100ಕ್ಕೂ ಹೆಚ್ಚು ಅಂಗವಿಕಲ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲದಾಗಿದೆ ಎಂದು ಶಿಕ್ಷಕರು ಹೇಳುತ್ತಾರೆ.
‘ರಾಜ್ಯ ಸರ್ಕಾರಕ್ಕೆ ಅಂಗವಿಕಲ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ. ಅಂತೆಯೇ ಅವರ ಶಿಕ್ಷಣವನ್ನು ನಿರ್ಲಕ್ಷಿಸಿದೆ. ಮಹಾರಾಷ್ಟ್ರದಲ್ಲಿ 6,000 ವಿಶೇಷ ಶಿಕ್ಷಕರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ನೇಮಕ ಮಾಡಿಕೊಳ್ಳಬೇಕು. 2018ರಿಂದ ಕನಿಷ್ಠ ವೇತನಕ್ಕೆ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಶಿಕ್ಷಕರನ್ನು ಕಾಯಂ ಮಾಡಿಕೊಳ್ಳಲು ಆದ್ಯತೆ ನೀಡಬೇಕು’ ಎಂದು ವಿಶೇಷ ಬಿ.ಇಡಿ ಪದವಿ ಪಡೆದಿರುವ ಅಭ್ಯರ್ಥಿ ರಶ್ಮಿ ಒತ್ತಾಯಿಸಿದರು.
ಆರ್ಸಿಐನಿಂದ ತರಬೇತಿ
ಅಂಗವಿಕಲರ ಹಕ್ಕುಗಳ ಕಾಯ್ದೆಯಲ್ಲಿ ಗುರುತಿಸಲಾಗಿರುವ 21 ವೈಕಲ್ಯಗಳ ವಿದ್ಯಾರ್ಥಿಗಳಿಗೆ ಪಾಠಬೋಧನೆ ಮಾಡಲು ಭಾರತೀಯ ಪುನರ್ವಸತಿ ಮಂಡಳಿ (ಆರ್ಸಿಐ) ವಿಶೇಷ ತರಬೇತಿ ನೀಡುತ್ತದೆ. 1ರಿಂದ 5ನೇ ತರಗತಿಗೆ ಬೋಧಿಸುವವರಿಗೆ ವಿಶೇಷ ಡಿ.ಇಡಿ, 6ರಿಂದ 10ನೇ ತರಗತಿಗಳಿಗೆ ಬೋಧಿಸುವವರಿಗೆ ವಿಶೇಷ ಬಿ.ಇಡಿ ಪದವಿ ನೀಡುತ್ತದೆ. ರಾಜ್ಯದಲ್ಲಿ ಸಾವಿರಾರು ಅಭ್ಯರ್ಥಿಗಳು ವಿಶೇಷ ಶಿಕ್ಷಣ ಪದವಿ ಪಡೆದಿದ್ದು ನೇಮಕಾತಿ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.