ಹುಬ್ಬಳ್ಳಿ: ಇಲ್ಲಿಂದ ಗದುಗಿಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗಿರುವ ಉತ್ತರ ಕರ್ನಾಟಕದ ಮೊದಲ ಪಾರಂಪರಿಕ ರೈಲ್ವೆ ವಸ್ತು ಸಂಗ್ರಹಾಲಯವನ್ನು ಭಾನುವಾರ ನವದೆಹಲಿಯಿಂದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಆನ್ಲೈನ್ ಮೂಲಕ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು ’ದೇಶದಾದ್ಯಂತ ಎಲೆಕ್ಟ್ರಾನಿಕ್ ಚಾಲಿತ ಮತ್ತು ಪರಿಸರ ಸ್ನೇಹಿ ರೈಲುಗಳನ್ನು ಓಡಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಇದಕ್ಕೆ ಪೂರಕವಾಗಿ ನಾವೆಲ್ಲರೂ ದುಡಿಯೋಣ’ ಎಂದು ಕರೆ ನೀಡಿದರು.
‘ರೈಲು ಕೇವಲ ವಾಣಿಜ್ಯ ವಹಿವಾಟು ಮತ್ತು ಲಾಭದ ಉದ್ದೇಶ ಹೊಂದಿಲ್ಲ. ಇದು ಮನುಷ್ಯನ ಬದುಕಿನ ಜೊತೆ ಭಾವನಾತ್ಮಕ ಬೆಸುಗೆ ಹೊಂದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳುವಿನಲ್ಲಿ ನವೀಕರಣಗೊಂಡ ‘ಮ್ಯೂಸಿಯಂ ಮಾಲ್ಗುಡಿ’ ಶಂಕರನಾಗ್ ಅವರನ್ನು ನೆನಪಿಸುತ್ತದೆ’ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ‘ಬೆಳಗಾವಿಯಿಂದ ಬಸ್ ಮೂಲಕ ಆರೇಳು ತಾಸಿನಲ್ಲಿ ಬೆಂಗಳೂರಿಗೆ ಹೋಗಬಹುದು. ಆದರೆ, ರೈಲಿನಲ್ಲಿ ಕನಿಷ್ಠ ಎಂಟು ಗಂಟೆಯಾದರೂ ಬೇಕಾಗುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಚಾಲಿತ ರೈಲು ಓಡಿಸಬೇಕು, ಜೋಡಿ ಮಾರ್ಗದ ಕಾರ್ಯ ಪೂರ್ಣಗೊಳಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.