ADVERTISEMENT

ಕನ್ನಡ ದಿನಪತ್ರಿಕೆ ಸಂಪಾದಕರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 20:27 IST
Last Updated 21 ಅಕ್ಟೋಬರ್ 2022, 20:27 IST
   

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಅವಹೇಳನಕಾರಿಯಾಗಿ ಬರೆದಿದ್ದ ಕನ್ನಡ ದಿನಪತ್ರಿಕೆಯೊಂದರ ಪ್ರಧಾನ ಸಂಪಾದಕರಿಗೆ ನೋಟಿಸ್‌ ನೀಡಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.

‘ರಾಷ್ಟ್ರಪತಿ ವಿರುದ್ಧ ಅವಹೇಳನಕಾರಿಯಾಗಿ ಬರೆದುದರ ಬಗ್ಗೆ ಮಾಡಲಾಗಿದ್ದ ಪೋಸ್ಟ್ ಅನ್ನು ರಾಷ್ಟ್ರೀಯ ಮಹಿಳಾ ಆಯೋಗವು ಪರಿಗ
ಣಿಸಿದೆ. ಅಕ್ಟೋಬರ್ 26ರ ಮಧ್ಯಾಹ್ನ 12.30ಕ್ಕೆ ಖುದ್ದಾಗಿ ಹಾಜರಾಗುವಂತೆ ಆ ಪತ್ರಕರ್ತರಿಗೆ ನೋಟಿಸ್‌ ನೀಡಲಾಗಿದೆ’ ಎಂದು ಆಯೋಗವು ಶುಕ್ರವಾರ ಬೆಳಿಗ್ಗೆ ಟ್ವೀಟ್‌ ಮಾಡಿದೆ.

ಇದಕ್ಕೂ ಮುನ್ನ ಮೊಹಮ್ಮದ್ ಮಫಾಜ್ ಎಂಬುವವರು ಈ ಬಗ್ಗೆ ಅಕ್ಟೋಬರ್ 9ರಂದು ಟ್ವೀಟ್ ಮಾಡಿದ್ದರು. ‘(ಕನ್ನಡ ದಿನಪತ್ರಿಕೆ ವಿಶ್ವವಾಣಿ) ಪತ್ರಕರ್ತ (ಪ್ರಧಾನ ಸಂಪಾದಕ) ರಾಷ್ಟ್ರಪತಿ ಅವರನ್ನು ಅವಹೇಳನ ಮಾಡಿದ್ದಾರೆ’ ಎಂದು ಮಫಾಜ್‌ ಟ್ವೀಟ್‌
ಮಾಡಿದ್ದರು.

ADVERTISEMENT

ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿದ್ದ ಲೇಖನದ ಎರಡು ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದರು. ಜತೆಗೆ ಟ್ವೀಟ್‌ ಅನ್ನು ರಾಷ್ಟ್ರಪತಿ ಭವನದ ಟ್ವಿಟರ್ ಖಾತೆಗೆ ಟ್ಯಾಗ್‌ ಮಾಡಿದ್ದರು.

ಈ ಟ್ವೀಟ್‌ ಅನ್ನು ಪರಿಶೀಲಿಸುತ್ತೇವೆ ಎಂದು ಆಯೋಗವು ಗುರುವಾರ ಸಂಜೆ, ಮಫಾಜ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿತ್ತು. ಶುಕ್ರವಾರ ಮತ್ತೊಂದು ಪ್ರತಿಕ್ರಿಯೆ ನೀಡಿ, ನೋಟಿಸ್‌ ನೀಡಿರುವ ಮಾಹಿತಿಯನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.