ಶಿರಸಿ: ರಾಜ್ಯದ ವಿವಿಧ ಭಾಗಗಳ ಕಬ್ಬು ಬೆಳೆಗಾರರಿಗೆ ನೀಡಲು ಬಾಕಿಯಿರುವ ₹ 2000 ಕೋಟಿ ಮೊತ್ತವನ್ನು ಶೀಘ್ರ ನೀಡುವಂತೆ ಕಾರ್ಖಾನೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ತ್ವರಿತವಾಗಿ ಹಣ ಬಿಡುಗಡೆ ಆಗಲಿದೆ ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸಕ್ತ ವರ್ಷ ₹ 1.70ಲಕ್ಷ ಕೋಟಿ ಮೌಲ್ಯದ ಕಬ್ಬು ಅರೆಯಲಾಗಿದೆ. ಅದರಲ್ಲಿ ₹ 1.68 ಲಕ್ಷ ಕೋಟಿ ಮೊತ್ತವನ್ನು ಬೆಳೆಗಾರರಿಗೆ ಪಾವತಿಸಲಾಗಿದೆ. ಶೇ 87ರಷ್ಟು ಪಾವತಿಯಾಗಿದೆ. ಉಳಿದ ಮೊತ್ತ ನೀಡುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಅವರು 10ರಿಂದ 12 ದಿನಗಳ ಸಮಯ ಕೇಳಿದ್ದಾರೆ. ಒಂದೊಮ್ಮೆ ಹಣ ನೀಡದಿದ್ದರೆ ಅಪರಾಧ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ರಾಜ್ಯದಾದ್ಯಂತ ಲೋಕೋಪಯೋಗಿ ಇಲಾಖೆಯಡಿ ಮಂಜೂರು ಆದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರಿಗೆ ನೀಡಬೇಕಿದ್ದ ಹಣ ಸರ್ಕಾರಕ್ಕೆ ವಾಪಸ್ಸಾಗಲು ಅಧಿಕಾರಿಗಳೇ ಕಾರಣ. ಅವರ ನಿರ್ಲಕ್ಷ್ಯದಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಾಪಸ್ಸಾದ ಹಣವನ್ನು ಮತ್ತೆ ನೀಡುವಂತೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.