ADVERTISEMENT

ಸಾರಿಗೆ ನೌಕರರು ಮುಷ್ಕರ ನಡೆಸುವ ಸಮಯ ಇದಲ್ಲ: ಹೈಕೋರ್ಟ್

ಕೋವಿಡ್ ಕಾಲದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಸಲ್ಲ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 15:59 IST
Last Updated 20 ಏಪ್ರಿಲ್ 2021, 15:59 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್ ಉಲ್ಬಣ ಆಗಿರುವ ಕಾರಣ ಸಾರಿಗೆ ನೌಕರರು ಮುಷ್ಕರ ನಡೆಸುವ ಸಮಯ ಇದಲ್ಲ. ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಕಾಯ್ದಿರಿಸಿಕೊಂಡು ಬಸ್ ಕಾರ್ಯಾಚರಣೆ ಆರಂಭಿಸುತ್ತಾರೆ’ ಎಂದು ಹೈಕೋರ್ಟ್‌ ಮಂಗಳವಾರ ಭರವಸೆ ವ್ಯಕ್ತಪಡಿಸಿದೆ.

ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಸೇರಿ ಪ್ರತಿವಾದಿಗಳಿಗೆ ನೋಟಿಸ್ ನೀಡಲು ಆದೇಶಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಯನ್ನು ಗುರುವಾರ ಬೆಳಿಗ್ಗೆ 11.40ಕ್ಕೆ ನಿಗದಿ ಮಾಡಿದೆ.

ಸಾರಿಗೆ ನೌಕರರ ಮುಷ್ಕರದ ಸಂಬಂಧ ನ್ಯಾಯಾಲಯದ ಮಧ್ಯಸ್ಥಿಕೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ‘ಸಾರಿಗೆ ನೌಕರರ ಕೂಟದ ಬೇಡಿಕೆಗಳು ನ್ಯಾಯಸಮ್ಮತ ಎಂದು ಊಹಿಸಿಕೊಂಡರೂ, ಕೋವಿಡ್ ಎರಡನೇ ಅಲೆ ಇರುವ ಕಾರಣ ಮುಷ್ಕರ ಮುಂದುವರಿಸುವ ಕಾಲ ಇದಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ADVERTISEMENT

‘ನೌಕರರ ಬೇಡಿಕೆ ನ್ಯಾಯಸಮ್ಮತವಾಗಿದೆ ಅಥವಾ ಇಲ್ಲ ಎಂಬುದು ಈಗ ವಿಷಯವಲ್ಲ. ಕೋವಿಡ್ ಉಲ್ಬಣಗೊಂಡಿರುವ ಸಂದರ್ಭದಲ್ಲಿ ಮುಷ್ಕರ ನಡೆಸುವುದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಕೋವಿಡ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳಿಗೆ ತೆರಳಲು ಸಾಕಷ್ಟು ಮಂದಿಗೆ ಸಾರಿಗೆ ಸಂಸ್ಥೆ ಬಸ್‌ಗಳ ಅಗತ್ಯವಿದೆ’ ಎಂದು ಪೀಠ ಹೇಳಿತು.

‘ಈಗಾಗಲೇ ಒತ್ತಡದಲ್ಲಿರುವ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆ ತ‌ಪ್ಪಿಸಬೇಕಿದೆ. ಹೀಗಾಗಿ, ಬೇಡಿಕೆಗಳ ಈಡೇರಿಕೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಮುಷ್ಕರ ವಾಪಸ್ ಪಡೆಯುವ ಭರವಸೆಯೊಂದಿಗೆ ನ್ಯಾಯಾಲಯದ ಮುಂದೆ ಕೂಟ ಬರಲಿದೆ’ ಎಂದು ಆಶಿಸಿತು.

‘ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಕಾರ್ಯಸಾಧುವಲ್ಲದ ಬೇಡಿಕೆಯನ್ನು ನೌಕರರ ಕೂಟ ಮುಂದಿಟ್ಟಿದೆ. ಮುಷ್ಕರ ನಡೆಸುತ್ತಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.