ಬೆಂಗಳೂರು: ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿರುವ ರೈಲು ಅಪಘಾತದ ಸಂತ್ರಸ್ತರಲ್ಲಿ ಕರ್ನಾಟಕದ ಯಾರೊಬ್ಬರೂ ಪತ್ತೆಯಾಗಿಲ್ಲ ಎಂದು ದುರ್ಘಟನೆಯಲ್ಲಿ ತೊಂದರೆಗೊಳಗಾಗದ ಕನ್ನಡಿಗರನ್ನು ರಕ್ಷಿಸಿ ಕರೆತರಲು ನಿಯೋಜಿಸಿರುವ ರಕ್ಷಣಾ ತಂಡದ ಮುಖ್ಯಸ್ಥ, ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
‘ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದೇವೆ. ದುರ್ಘಟನೆಯಲ್ಲಿ ಗಾಯಗೊಂಡಿರುವವರನ್ನು ಬಾಲಸೋರ್ ಮತ್ತು ಭದ್ರಕ್ ಜಿಲ್ಲೆಗಳ ಐದು ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನೂ ಇದೇ ಆಸ್ಪತ್ರೆಗಳಲ್ಲಿ ಇರಿಸಲಾಗಿದೆ. ಐದೂ ಆಸ್ಪತ್ರೆಗಳಿಗೆ ನಮ್ಮ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ’ ಎಂದು ಅವರು ಭಾನುವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
‘ಗಾಯಾಳುಗಳು ಮತ್ತು ಮೃತಪಟ್ಟವರಲ್ಲಿ ಕರ್ನಾಟಕದ ವ್ಯಕ್ತಿಗಳು ಪತ್ತೆಯಾಗಿಲ್ಲ. ಒಡಿಶಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಜತೆಗೂ ಸಭೆ ನಡೆಸಿದ್ದೇವೆ. ವೈದ್ಯಕೀಯ ನೆರವು ಸೇರಿದಂತೆ ಯಾವುದೇ ಬಗೆಯ ಸಹಾಯ ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದೇಶವನ್ನು ತಲುಪಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಸಚಿವರು ಮತ್ತು ಅವರೊಂದಿಗೆ ತೆರಳಿದ್ದ ತಂಡದ ಸದಸ್ಯರಾದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ವಕ್ತಾರ ಅನಿಲ್ ಕುಮಾರ್ ತಡ್ಕಲ್, ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿ ಎಸ್.ಎಸ್.ಎಂ. ಗವಾಸ್ಕರ್ ಮತ್ತು ಸಿದ್ದನಗೌಡ ಭಾನುವಾರ ರಾತ್ರಿ ಬಾಲಸೋರ್ನಿಂದ ವಾಪಸಾಗಿದ್ದಾರೆ.
ಆದರೆ, ಬೆಂಗಳೂರಿನ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಕಾರ್ಮಿಕರೊಬ್ಬರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.