ಬೆಂಗಳೂರು:ಶೀಘ್ರವೇ ನನ್ನ ದಿನಚರಿ ಬದಲಾಯಿಸಿಕೊಳ್ಳುತ್ತೇನೆ. ವಾರದಲ್ಲಿ ಒಂದು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಧ ದಿನ ಅಧಿಕಾರಿಗಳು ಹಾಗೂ ಇನ್ನರ್ಧ ದಿನ ರೈತರ ಕಷ್ಟ ಕಾರ್ಪಣ್ಯ ಆಲಿಸುತ್ತೇನೆ....
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಶನಿವಾರ ಜನತಾ ದರ್ಶನ ಆರಂಭಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಹೀಗೆಂದರು.
‘ನಾನು ಬೆಂಗಳೂರಿನಲ್ಲಿ ಇದ್ದಾಗಲೆಲ್ಲಾ ಪ್ರತಿ ಶನಿವಾರ ತಪ್ಪದೇ ಜನತಾ ದರ್ಶನ ಕಾರ್ಯಕ್ರಮ ನಡೆಸುತ್ತೇನೆ’ ಎಂದರು.
‘ನಾನು ಯಾರಿಗೂ ನಿರಾಸೆ ಉಂಟು ಮಾಡುವುದಿಲ್ಲ. ಈ ತನಕ ಯಾರಿಗೂ ನಿರಾಸೆ ಉಂಟು ಮಾಡಿಯೂ ಇಲ್ಲ ಅದು ರಾತ್ರಿ 11 ಗಂಟೆಯಾದರೂ ಸರಿ, ಒಂದು ಗಂಟೆಯೇ ಆದರೂ ಸರಿ. ಜನರ ಅಹವಾಲು ಆಲಿಸಿಯೇ ತೀರುತ್ತೇನೆ’ ಎಂದರು.
₹138 ಕೋಟಿ ಸಂಗ್ರಹ
‘ಕೊಡಗು ಮತ್ತು ಕೇರಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸಾರ್ಜಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಈತನಕಒಟ್ಟು ₹138 ಕೋಟಿ ಸಂಗ್ರಹವಾಗಿದೆ’ ಎಂದರು.
ಪರವಾನಗಿ ಬೇಕು
‘ಗ್ರಾಮ ವಾಸ್ತವ್ಯ ನಡೆಸಲು ನನ್ನ ವೈದ್ಯರು ನನಗೆ ಇನ್ನೂ ಅವಕಾಶ ನೀಡಿಲ್ಲ. ಹಾಗಾಗಿ ಗ್ರಾಮ ವಾಸ್ತವ್ಯದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದರು.
ನಾಯಿ ದಾಳಿ: ಕುಮಾರಸ್ವಾಮಿ ಅಸಹಾಯಕತೆ
‘ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿದ ಸಂದರ್ಭದಲ್ಲಿ ನಾವು ಏನಾದರೂ ಮಾಡಲು ಮುಂದಾದರೆ ಪ್ರಾಣಿ ಪ್ರೀತಿಯ ಜನರು ನಮ್ಮನ್ನು ಪ್ರಶ್ನಿಸುತ್ತಾರೆ ಏನು ಮಾಡುವುದು’ ಎಂದು ಕುಮಾರಸ್ವಾಮಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಇತ್ತೀಚೆಗೆ ಬಿಬಿಎಂಪಿ ವ್ಯಾಪ್ತಿಯ ವಿಭೂತಿಪುರದಲ್ಲಿ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಷಯ ಗೊತ್ತಿಲ್ಲ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.