
ಬೆಂಗಳೂರು: ಅರಣ್ಯ ಇಲಾಖೆಯ ಕಾಯಂ ಅಧಿಕಾರಿ ಮತ್ತು ಸಿಬ್ಬಂದಿಗೆ ₹1 ಕೋಟಿ ಮೊತ್ತದ ಅಪಘಾತ ವಿಮೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ₹20 ಲಕ್ಷ ಮೊತ್ತದ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
ಗುರುವಾರ ಪ್ರಕಟಣೆ ಹೊರಡಿಸಿರುವ ಅವರು, ‘ಇಲಾಖೆಯ ಸಿಬ್ಬಂದಿಗೆ ವಿಮೆ ಭದ್ರತೆ ಒದಗಿಸುವ ಉದ್ದೇಶದಿಂದ ಬ್ಯಾಂಕ್ ಆಫ್ ಬರೋಡಾದ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಕಾಡು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಮುಂಚೂಣಿ ಸಿಬ್ಬಂದಿ, ಹಸಿರು ಸೈನಿಕರು ಪ್ರತಿದಿನ ಅಪಾಯಗಳನ್ನು ಎದುರಿಸುತ್ತಾ ಶ್ರಮಿಸುತ್ತಿದ್ದಾರೆ. ಅಂತಹ ಶೌರ್ಯಶಾಲಿ ಮುಂಚೂಣಿ ಸಿಬ್ಬಂದಿಯನ್ನು ಇಲಾಖೆ ಕಳೆದುಕೊಂಡಿದೆ. ಹೀಗಾಗಿ ಎಲ್ಲ ಸಿಬ್ಬಂದಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸಲು ಈ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅರಣ್ಯ ಸಂರಕ್ಷಣೆಯಲ್ಲಿ ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಯ ಮಹತ್ತರ ಪಾತ್ರವಿದೆ. ಹೀಗಾಗಿ ಅವರಿಗೂ ₹20 ಲಕ್ಷಗಳ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ’ ಎಂದಿದ್ದಾರೆ.
‘ಇಲಾಖೆಯ ಎಲ್ಲ ಕಾಯಂ ಸಿಬ್ಬಂದಿಗೆ ಅವರ ವೇತನ ಮತ್ತು ಶ್ರೇಣಿಯ ಹೊರತಾಗಿ ಎಲ್ಲರಿಗೂ ₹1 ಕೋಟಿ ಮೊತ್ತದ ಅಪಘಾತ ಮರಣ ವಿಮೆಯನ್ನು ಬ್ಯಾಂಕ್ ಒದಗಿಸುತ್ತದೆ. ಸಿಬ್ಬಂದಿಯು ಕರ್ತವ್ಯದಲ್ಲಿ ಇದ್ದಾಗಲೇ ಮೃತಪಟ್ಟರೆ, ಹೆಚ್ಚುವರಿಯಾಗಿ ₹25 ಲಕ್ಷವನ್ನು ಬ್ಯಾಂಕ್ ಪಾವತಿಸಲಿದೆ’ ಎಂದು ವಿವರಿಸಿದ್ದಾರೆ.
‘ಈ ಸೌಲಭ್ಯ ಪಡೆಯಲು ಎಲ್ಲ ಸಿಬ್ಬಂದಿ ಬ್ಯಾಂಕ್ ಆಫ್ ಬರೋಡಾದಲ್ಲಿ ವೇತನ ಖಾತೆಯನ್ನು ತೆರೆಯಬೇಕಿದೆ. ನಿವೃತ್ತಿ ನಂತರವೂ ಪಿಂಚಣಿ ಖಾತೆಯನ್ನು ಅದೇ ಬ್ಯಾಂಕ್ನಲ್ಲಿ ಮುಂದುವರೆಸಿದರೆ, ಅಪಘಾತ ವಿಮೆ ಸೌಲಭ್ಯ 70 ವರ್ಷ ವಯಸ್ಸಿನವರೆಗೆ ಮುಂದುವರೆಯಲಿದೆ. ಅಲ್ಲದೆ, ಕಾಯಂ ಉದ್ಯೋಗಿಗಳಿಗೆ ₹10 ಲಕ್ಷದ ಜೀವ ವಿಮೆ ರಕ್ಷಣೆಯನ್ನೂ ಬ್ಯಾಂಕ್ ಒದಗಿಸುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
ಮುಂಚೂಣಿ ಹೊರಗುತ್ತಿಗೆ ಸಿಬ್ಬಂದಿಗೂ ₹20 ಲಕ್ಷದ ಅಪಘಾತ ವಿಮೆ ಭದ್ರತೆ
ವಿಮೆ ಮತ್ತಿತರ ಸೌಲಭ್ಯ ಒದಗಿಸಲು ಬ್ಯಾಂಕ್ ಆಫ್ ಬರೋಡಾ ಜತೆ ಇಲಾಖೆ ಒಪ್ಪಂದ
ಬ್ಯಾಂಕ್ ಆಫ್ ಬರೋಡಾದಲ್ಲಿ ಸಂಬಳ ಖಾತೆ ತೆರೆಯಲು ಸಿಬ್ಬಂದಿಗೆ ಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.