ADVERTISEMENT

ಕಾರವಾರ: 13 ಸೀಟುಗಳಿಗೆ ಒಂದೇ ಅರ್ಜಿ ಸಲ್ಲಿಕೆ!

ಸರ್ಕಾರಿ, ಅನುದಾನಿತ ಶಾಲೆಗಳಿದ್ದಲ್ಲಿ ಆರ್‌ಟಿಇ ಅಡಿ ಪ್ರವೇಶಾವಕಾಶವಿಲ್ಲ

ಸದಾಶಿವ ಎಂ.ಎಸ್‌.
Published 9 ಮೇ 2019, 19:31 IST
Last Updated 9 ಮೇ 2019, 19:31 IST
   

ಕಾರವಾರ:ಈ ಬಾರಿ ಉತ್ತರ ಕನ್ನಡ ಜಿಲ್ಲೆಯಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಕೇವಲ ಒಂದು ಅರ್ಜಿ ಸಲ್ಲಿಕೆಯಾಗಿದೆ. ಕಾರವಾರ ಜಿಲ್ಲೆಯ ಮೂರು ಹಾಗೂ ಶಿರಸಿ ಜಿಲ್ಲೆಯ ಒಂಬತ್ತು ಶಾಲೆಗಳಲ್ಲಿಪ್ರವೇಶಾವಕಾಶಕ್ಕೆ ಶಿಫಾರಸು ಮಾಡಲಾಗಿತ್ತು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇರುವ ಪ್ರದೇಶದಲ್ಲಿ ಆರ್‌ಟಿಇ ಅಡಿ ಪ್ರವೇಶಾತಿಗೆ ಈ ಶೈಕ್ಷಣಿಕ ವರ್ಷದಿಂದ ಅವಕಾಶ ನಿರಾಕರಿಸಲಾಗಿದೆ. ಇದರಿಂದ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಕಾಯ್ದೆಯಡಿ ಸೀಟುಗಳ ಹಂಚಿಕೆ ಗಣನೀಯವಾಗಿ ಇಳಿಕೆಯಾಗಿದೆ. ಅದೇರೀತಿ, ಲಭ್ಯ ಸೀಟುಗಳಿಗೆ ಅರ್ಜಿ ಸಲ್ಲಿಸಲೂ ಪೋಷಕರು ಮುಂದಾಗದಿರುವುದು ಅಚ್ಚರಿ ಮೂಡಿಸಿದೆ.

12 ಸೀಟುಗಳು ಖಾಲಿ!:ಕಾರವಾರ ಶೈಕ್ಷಣಿಕ ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿಕೇವಲ ಮೂರು ಶಾಲೆಗಳು ಆರ್‌ಟಿಸಿ ಕಾಯ್ದೆಯಡಿ ಪ್ರವೇಶಾತಿ ಮಾಡಿಕೊಳ್ಳಬಹುದು.ಒಟ್ಟು 13 ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾದರೂ ಕೇವಲ ಒಂದು ಅರ್ಜಿ ಸಲ್ಲಿಕೆಯಾಗಿದೆ. ಈ ಜಿಲ್ಲೆಯಲ್ಲಿ 2018–19ನೇ ಸಾಲಿನಲ್ಲಿ 859 ಸೀಟುಗಳ ಪೈಕಿ 675 ಭರ್ತಿಯಾಗಿದ್ದವು. ಅರ್ಜಿ ಸಲ್ಲಿಸಲೂ ಏ.25ರಂದೇ ಕೊನೆಯ ದಿನ ಆಗಿದ್ದರಿಂದ ಉಳಿದ 12 ಸೀಟುಗಳ ಖಾಲಿಯಾಗಿಯೇ ಇರಲಿವೆ.

ADVERTISEMENT

ಶಿರಸಿಯಲ್ಲಿ ಅನ್ವಯಿಸುವುದೇ ಇಲ್ಲ!: ಘಟ್ಟದ ಮೇಲಿನ ಭಾಗದ ತಾಲ್ಲೂಕುಗಳನ್ನು ಒಳಗೊಂಡ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಂಬತ್ತು ಶಾಲೆಗಳನ್ನು ಕಾಯ್ದೆಯಡಿ ಪ್ರವೇಶಾವಕಾಶಕ್ಕೆ ಗುರುತಿಸಲಾಗಿತ್ತು. ಆದರೆ, ಎಲ್ಲವೂ ಅನುದಾನಿತ ಶಾಲೆಗಳೇ ಆಗಿರುವ ಕಾರಣ ಒಂದೂ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಕಳೆದ ಬಾರಿ 44 ಶಾಲೆಗಳಿಂದ 389 ಸೀಟುಗಳನ್ನು ಆರ್‌ಟಿಇ ಅರ್ಜಿಗಳಡಿ ಮೀಸಲಿಡಲಾಗಿತ್ತು. ಅವೆಲ್ಲವೂ ಭರ್ತಿಯಾಗಿದ್ದವು. ಆದರೆ, ಈ ಬಾರಿ ಒಬ್ಬರಿಗೂ ಅವಕಾಶವಿಲ್ಲದಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ಬಡವರ ಮಕ್ಕಳಿಗೂ ಪ್ರತಿಷ್ಠಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುವ ಅವಕಾಶವನ್ನು ಈ ಕಾಯ್ದೆನೀಡಿತ್ತು. ಆದರೆ, ನಿಯಮವನ್ನು ಕ್ರಮೇಣ ಬದಲಿಸಲಾಗಿದೆ. ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿದಂತಿದೆ.ಅತ್ಯುತ್ತಮ ಕಾಯ್ದೆಯನ್ನು ಸದ್ದಿಲ್ಲದೇ ತೆರೆಮರೆಗೆ ಸರಿಸುವ ಪ್ರಕ್ರಿಯೆಯ ಭಾಗ ಇದಾಗಿದೆ. ಇದರಿಂದ ಶ್ರೀಮಂತರ ಮಕ್ಕಳು ಮತ್ತು ಬಡವರ ಮಕ್ಕಳ ನಡುವಿನತಾರತಮ್ಯಮುಂದುವರಿಯಲಿದೆ’ ಎಂಬುದು ಕಾರವಾರದ ಪೋಷಕ ಶ್ರೀನಿವಾಸ ನಾಯ್ಕ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.