ADVERTISEMENT

ಗೋಹತ್ಯೆ ನಿಷೇಧ, ಲವ್‌ ಜಿಹಾದ್‌ ಕಾಯ್ದೆ ಮಂಡನೆ ವಿರೋಧಿಸುತ್ತೇವೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 11:24 IST
Last Updated 6 ಡಿಸೆಂಬರ್ 2020, 11:24 IST
   

ಬೆಂಗಳೂರು: ‘ವಿಧಾನ ಮಂಡಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ನಿಷೇಧ ಕಾಯ್ದೆಯ ಮಸೂದೆ ಮಂಡಿಸಿದರೆ ನಾವು (ಕಾಂಗ್ರೆಸ್‌) ವಿರೋಧಿಸುತ್ತೇವೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಸೋಮವಾರದಿಂದ (ಡಿ. 7) ಅಧಿವೇಶನ ನಡೆಯಲಿರುವುದರಿಂದ ಉಭಯ ಸದನಗಳ ಪಕ್ಷದ ಹಿರಿಯ ಸದಸ್ಯರ ಸಭೆ ಕರೆದಿದ್ದೆ. ಅಧಿವೇಶನದ ಕಾರ್ಯಸೂಚಿ ಇನ್ನೂ ಆಗಿಲ್ಲ. ಅಧಿವೇಶನದಲ್ಲಿ ಏನೇನು ಚರ್ಚೆ ಮಾಡಬೇಕು ಅಂದುಕೊಂಡಿದ್ದಾರೊ ಗೊತ್ತಿಲ್ಲ’ ಎಂದರು.

‘ಕಳೆದ ಬಾರಿಯ ನೆರೆ ಹಾವಳಿಯಿಂದ ಸಂತ್ರಸ್ತರಾದವರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಈಗ ಬಿಜೆಪಿಯವರು ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಮನೆಗಳನ್ನು ಕಟ್ಟಲು ಅನುದಾನ ಕೊಟ್ಟಿಲ್ಲ. ಅವರಿಗೆ ಬೇಕಾದವರಿಗೆ ಅನುದಾನ ಕೊಡಲು ಅನ್ ಲಾಕ್ ಮಾಡುತ್ತಾರೆ. ಬೇಡದವರಿಗೆ ಕೊಡಲ್ಲ’ ಎಂದು ದೂರಿದರು.

ADVERTISEMENT

‘ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಲವ್ ಜಿಹಾದ್ ಕಾಯ್ದೆ ತರಲು ಬಿಜೆಪಿ ಕಾರ್ಯಕಾರಿಣಿಯಲ್ಲಿ ಚರ್ಚೆ ಮಾಡಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಇಂಥ ಸಂಧರ್ಭದಲ್ಲಿ ಈ ರೀತಿಯ ಕಾಯ್ದೆ ತರಲು ಅವಕಾಶ ಇಲ್ಲ. ಈ ಕಾಯ್ದೆಗಳು ಜನರ ಮೇಲೆ ಪರಿಣಾಮ ಬೀರಲಿದೆ’ ಎಂದರು.

‘ಸರ್ಕಾರ ಎಷ್ಟು ಸಾಲ ತೆಗೆದುಕೊಂಡಿದೆ. ರಾಜ್ಯದ ಆರ್ಥಿಕ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸರ್ಕಾರ ಶ್ವೇತ ಪತ್ರ ಮಂಡಿಸಬೇಕು’ ಎಂದೂ ಸಿದ್ದರಾಮಯ್ಯ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.