ADVERTISEMENT

ಎಎಜಿಯಾಗಿ ಅರುಣ್‌ ಶ್ಯಾಮ್ ನೇಮಿಸಿದ ಸರ್ಕಾರ: ವಿರೋಧ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 17:12 IST
Last Updated 8 ಸೆಪ್ಟೆಂಬರ್ 2020, 17:12 IST
ವಿಧಾನಸೌಧ
ವಿಧಾನಸೌಧ    

ಬೆಂಗಳೂರು: ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ವಕೀಲ ಅರುಣ್‌ ಶ್ಯಾಮ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮತ್ತೊಬ್ಬ ವಕೀಲವೈ.ಎಚ್.ವಿಜಯಕುಮಾರ್ ಅವರನ್ನು ಕಲಬುರ್ಗಿ ಪೀಠದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಗಿದೆ. ಧಾರವಾಡ ಪೀಠದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿದ್ದ ಧ್ಯಾನ್ ಚಿನ್ನಪ್ಪ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ಅರುಣ್‌ ಶ್ಯಾಮ್‌ ಅವರ ನೇಮಕವನ್ನು ಹಲವು ಸಂಘಟನೆಗಳು ವಿರೋಧಿಸಿವೆ.

ADVERTISEMENT

‘ಅರುಣ್ ಶ್ಯಾಮ್ ಅವರು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪರ ವಕೀಲರಾಗಿ ಐದಾರು ವರ್ಷಗಳಿಂದ ಕರ್ನಾಟಕದ ನ್ಯಾಯಾಲಯಗಳಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಮಾಡಿದ್ದಾರೆ. ಅವರನ್ನು ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಆಗಿ ನೇಮಿಸುವುದುಸ್ವಾಮೀಜಿ ವಿರುದ್ಧ ಹೋರಾಟ ನಡೆಸುತ್ತಿರುವ ಸಂತ್ರಸ್ತೆಯರಿಗೆ ಮಾಡಿದ ಅನ್ಯಾಯ’ ಎಂದು ಅಖಿಲ ಹವ್ಯಕ ಒಕ್ಕೂಟ ಆರೋಪಿಸಿದೆ.

‘ಅರುಣ್‌ ಶ್ಯಾಮ್‌ ವಿರುದ್ಧ ಅತ್ಯಾಚಾರ ಆರೋಪದ ಪ್ರಕರಣ 2015ರಲ್ಲಿ ದಾಖಲಾಗಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.ಸಂತ್ರಸ್ತೆಯರಿಗೆ ಸರ್ಕಾರ ನೆರವು ನೀಡುವ ಬದಲು ಆಪಾದಿತರಿಗೆ ಸರ್ಕಾರದ ಹುದ್ದೆ ನೀಡುವ ಮೂಲಕ ನ್ಯಾಯ ಪ್ರಕ್ರಿಯೆಗೆ ಹಿನ್ನಡೆ ತಂದಂತಾಗಿದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು. ತಾರಾನಾಥ ಹೇಳಿದ್ದಾರೆ.

‘ಅತ್ಯಾಚಾರ ಆರೋಪ ಹೊತ್ತ ವರನ್ನು ಈ ಹುದ್ದೆಗೆ ನೇಮಿಸಿರುವುದು ನ್ಯಾಯಾಂಗದ ಬಗ್ಗೆ ಇದ್ದ ನಂಬಿಕೆ ಕಡಿಮೆ ಮಾಡಿದಂತಾಗಿದೆ. ಅವರ ನೇಮಕಾತಿಯನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.