ಬೆಂಗಳೂರು: ‘ಕನ್ನಡ ನನ್ನ ಅನ್ನದ ಭಾಷೆ. ಈ ಭಾಷೆಯ ಜಾನಪದ ಸಂಸ್ಕೃತಿಯ ಭಾಗವಾಗಿರುವ ಜೋಗತಿ ನೃತ್ಯ ಪ್ರಕಾರವೇ ನನ್ನನ್ನು ‘ಪದ್ಮಶ್ರೀ’ ಪುರಸ್ಕಾರದವರೆಗೆ ಕೊಂಡೊಯ್ದಿದೆ’ ಎಂದುಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಹೇಳಿದರು.
ವಿ.ವಿ.ಪುರದ ಬಿ.ಎಂ.ಎಸ್.ವಾಣಿಜ್ಯ ಮತ್ತು ನಿರ್ವಹಣಾ ಪದವಿ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನುಡಿ ಸಂಭ್ರಮ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಷ್ಟ್ರಮಟ್ಟದವರೆಗೆ ನನ್ನನ್ನು ಕರೆದುಕೊಂಡು ಹೋಗಿರುವುದು ಇದೇ ತಾಯಿ ಭಾಷೆ. ‘ಪದ್ಮಶ್ರೀ’ ಸ್ವೀಕರಿಸಿದಬಳಿಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು ಸಂದರ್ಶನ ನಡೆಸಿದವು. ಅವರಿಗೆಲ್ಲ ನಾನು ಕನ್ನಡದಲ್ಲೇ ಉತ್ತರಿಸಿದೆ. ನನ್ನನ್ನು ಈ ಮಟ್ಟಿಗೆ ಬೆಳೆಸಿದ್ದು ಕನ್ನಡ ಜಾನಪದ ಪ್ರಕಾರ. ಆ ಸಂಬಂಧವನ್ನು ನಾನು ಕಡಿದುಕೊಳ್ಳಲಾರೆ’ ಎಂದು ತಮ್ಮ ಭಾಷಾಭಿಮಾನ ಮೆರೆದರು.
ಬಿ.ಎಂ.ಶ್ರೀ.ಪ್ರತಿಷ್ಟಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ,‘ಭಾರತದ ಯಾವುದೇ ರಾಜ್ಯಗಳಿಗೆ ಬದುಕು ಕಟ್ಟಿಕೊಳ್ಳಲು ಹೋಗುವ ಪ್ರತಿಯೊಬ್ಬ ಅನ್ಯಭಾಷಿಕರು ಮೊದಲು ಅಲ್ಲಿನ ಭಾಷೆ, ಸಂಸ್ಕೃತಿಗಳೊಂದಿಗೆ ನಂಟು ಬೆಳೆಸಿಕೊಳ್ಳಬೇಕು. ರಾಜ್ಯಕ್ಕೆ ಶಿಕ್ಷಣ, ವೃತ್ತಿ ಹಾಗೂ ಬದುಕು ಅರಸಿ ಬರುವವರು ಮೊದಲು ಕನ್ನಡಿಗರಾಗಬೇಕು’ ಎಂದರು.
‘ಕನ್ನಡತನ ಹಾಗೂ ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳದಿದ್ದರೆ, ಅವರು ದ್ವೀಪ ಜೀವಿಗಳಾಗುತ್ತಾರೆ. ಕನ್ನಡಿಗರ ಮಿತಿಮೀರಿದ ಔದಾರ್ಯವೂ ರಾಜಧಾನಿಯಲ್ಲಿ ಕನ್ನಡತನದ ವಾತಾವರಣ ಕಲುಷಿತಗೊಳಿಸಲು ಪರೋಕ್ಷವಾಗಿ ಕಾರಣ’ ಎಂದರು.
ಜಾನಪದ ಅಕಾಡೆಮಿಯ ಸದಸ್ಯ ಜೋಗಿಲ ಸಿದ್ದರಾಜು,‘ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವಲ್ಲಿ ವಿದ್ಯಾರ್ಥಿಗಳು ಮಹತ್ವದ ಪಾತ್ರ ವಹಿಸಬೇಕು’ ಎಂದು ಹೇಳಿದರು.
ಬಿ.ಎಂ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಬಿ.ಎಸ್.ರಾಗಿಣಿ ನಾರಾಯಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮಂಜಮ್ಮ ಅವರುರೇಣುಕಾ ಎಲ್ಲಮ್ಮ ನಾಟಕದ ಕೆಲ ದೃಶ್ಯಗಳನ್ನು ನಟಿಸಿ ತೋರಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.