
ಚಿಕ್ಕಬಳ್ಳಾಪುರ: ‘ಖಾತೆ ಬದಲಾವಣೆ ಪ್ರಮಾಣ ಪತ್ರ (ಮ್ಯುಟೇಷನ್), ಋಣಭಾರ ರಾಹಿತ್ಯ ಪ್ರಮಾಣಪತ್ರ (ಇ.ಸಿ), ಆಕಾರ್ ಬಂದ್ ಮತ್ತು ಭೂಮಾಪನ ನಕ್ಷೆ(ಸರ್ವೆ ಸ್ಕೆಚ್) ಈ ನಾಲ್ಕೂ ದಾಖಲೆಗಳು ಇನ್ಮುಂದೆ ಪಹಣಿಯಲ್ಲಿಯೇ ಸಿಗಲಿವೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರತ್ಯೇಕವಾಗಿ ಈ ದಾಖಲೆಗಳಿಗಾಗಿ ರೈತರು ಈಗ ಬೇರೆ, ಬೇರೆ ಕಚೇರಿಗಳಿಗೆ ಅಲೆಯಬೇಕಾಗುತ್ತಿದೆ. ಈ ಸಮಸ್ಯೆ ಮನಗಂಡು ಪಹಣಿಯಲ್ಲಿಯೇ ಈ ನಾಲ್ಕೂ ದಾಖಲೆಗಳನ್ನೂ ಸೇರಿಸುವ ಕೆಲಸ ನಡೆಯುತ್ತಿದೆ’ ಎಂದರು.
ಏಕೀಕೃತ ವ್ಯವಸ್ಥೆಯಡಿ ಆನ್ಲೈನ್ ಮೂಲಕ ದಾಖಲೆ ನೀಡಲಾಗುವುದು. ಈ ವ್ಯವಸ್ಥೆ ರೂಪಿಸಲು ಐದಾರು ತಿಂಗಳಿನಿಂದ ಕೆಲಸ ಮಾಡಲಾಗುತ್ತಿದೆ. ನಂತರದ ಹಂತದಲ್ಲಿ ಪಹಣಿಯಲ್ಲಿಯೇ ಜಮೀನಿನ ಡ್ರೋನ್ ಚಿತ್ರ, ಜಮೀನು ಮಾಲೀಕರ ಚಿತ್ರ ಸಹ ಸೇರಿಸಲಾಗುವುದು’ ಎಂದರು.
‘ಬಜೆಟ್ ಮಂಡನೆ ನಂತರದ ಒಂದೆರೆಡು ತಿಂಗಳಲ್ಲಿ ಪಹಣಿಯ ಜೊತೆಯಲ್ಲಿಯೇ ಮ್ಯುಟೇಷನ್, ಇ.ಸಿ, ಆಕಾರ್ ಬಂದ್ ಮತ್ತು ಸರ್ವೆ ಸ್ಕೆಚ್ ಸೇರಿಸಿ ಕೊಡುತ್ತೇವೆ ಎಂದು ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.