ADVERTISEMENT

ಸರ್ಕಾರ ಬೇಗ ತೀರ್ಮಾನ ಕೈಗೊಳ್ಳಲಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ ಗಡುವು

ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 17:44 IST
Last Updated 12 ಜನವರಿ 2021, 17:44 IST
ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಬಸವ ಜಯ ಮೃತ್ಯುಂಜಯ ಸ್ವಾಮೀಜಿ   

ಬಾಗಲಕೋಟೆ: ‘ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಚೆಂಡು ಈಗ ಸರ್ಕಾರದ ಅಂಗಳದಲ್ಲಿದೆ. ಪಾದಯಾತ್ರೆ ಆರಂಭಕ್ಕೆ ಇನ್ನು24 ಗಂಟೆ ಮಾತ್ರ ಬಾಕಿ ಇದ್ದು, ಅಷ್ಟರೊಳಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿಯ ಮಕರ ಸಂಕ್ರಾಂತಿ ಪಂಚಮಸಾಲಿ ಸಮಾಜಕ್ಕೆ ಸಂಕ್ರಮಣದ ಘಟ್ಟವಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ಪೂರಕವಾಗಿ ನಿರ್ಧಾರ ಕೈಗೊಂಡರೆ ಜನವರಿ 14 ರಂದು ಕೂಡಲಸಂಗಮದಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ವಿಜಯೋತ್ಸವ ಇಲ್ಲವೇ ಸರ್ಕಾರಕ್ಕೆ ಅಭಿನಂದನೆ ಕಾರ್ಯಕ್ರಮವಾಗಿ ಬದಲಾಗಲಿದೆ. ಇಲ್ಲದಿದ್ದರೆ ಹೋರಾಟದ ಹಾದಿಯಾಗಲಿದೆ. ಹೀಗಾಗಿ ಅಭಿನಂದನೆಯೋ ಇಲ್ಲವೇ ಹೋರಾಟವೋ ಎಂಬುದನ್ನು ಸರ್ಕಾರವೇ ನಿರ್ಧರಿಸಲಿ’ ಎಂದರು.

‘ಪಾದಯಾತ್ರೆ ಆರಂಭದ ಮೊದಲ ದಿನ ಕೂಡಲಸಂಗಮದಲ್ಲಿ ಸಮಾಜದ 2 ಲಕ್ಷ ಮಂದಿ ಸೇರಲಿದ್ದಾರೆ. ನಿತ್ಯ 20 ಕಿ.ಮೀ ನಂತೆ 700 ಕಿ.ಮೀ ಪಾದಯಾತ್ರೆಯ ಹಾದಿ ಸಾಗಲಿದೆ. ನಮ್ಮ ಈ ಹೋರಾಟಕ್ಕೆ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಪಂಚಮಸಾಲಿ ಸಮುದಾಯವನ್ನು ಈ ಹಿಂದೆ ಯಡಿಯೂರಪ್ಪ ಅವರೇ ಪ್ರವರ್ಗ 3 ಬಿಗೆ ಸೇರ್ಪಡೆ ಮಾಡಿದ್ದರು. 2ಎಗೆ ಸೇರ್ಪಡೆ ಮಾಡುವುದಾಗಿ ಈ ಹಿಂದೆ ಭರವಸೆ ಕೂಡ ನೀಡಿದ್ದಾರೆ. ಅವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂಬ ವಿಶ್ವಾಸವಿದೆ. ಈ ಹಿಂದೆ ಬೇರೆ ಬೇರೆ ಸಮುದಾಯಗಳು ಮೀಸಲಾತಿಗೆ ಆಗ್ರಹಿಸಿ ಸಮಾವೇಶಗಳ ಮಾಡಿದಾಗ ಯಡಿಯೂರಪ್ಪ ಕೇವಲ 24 ಗಂಟೆಗಳಲ್ಲಿ ಅವರ ಬೇಡಿಕೆಗೆ ಸ್ಪಂದಿಸಿದ್ದಾರೆ. ನಮ್ಮ ಸಮಾಜದ್ದು 24 ವರ್ಷಗಳ ಹಿಂದಿನ ಹೋರಾಟ. ಯಡಿಯೂರಪ್ಪ ಅವರಿಗೆ ಪಂಚಮಸಾಲಿ ಸಮಾಜದ ಋಣ ಇದೆ. ಅದಕ್ಕಾಗಿಯಾದರೂ ನಮ್ಮ ಬೇಡಿಕೆ ಈಡೇರಿಸಲಿದ್ದಾರೆ ಎಂಬ ನಂಬಿಕೆ ಇದೆ’ ಎಂದರು.

ಬ್ಲ್ಯಾಕ್‌ಮೇಲ್ ಉದ್ದೇಶ ಇಲ್ಲ...

ಮೀಸಲಾತಿ ನೆಪದಲ್ಲಿ ಪಂಚಮಸಾಲಿ ಸಮುದಾಯವನ್ನು ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟುವ ವಿರೋಧಿಗಳ ಹುನ್ನಾರಕ್ಕೆ ಸ್ವಾಮೀಜಿ ದಾಳವಾಗಿದ್ದಾರೆ. ಹೀಗಾಗಿಯೇ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಬಸವ ಜಯಮೃತ್ಯುಂಜಯ ಸ್ವಾಮೀಜಿ ನಿರಾಕರಿಸಿದರು.

‘ಇದು ಸತ್ಯಕ್ಕೆ ದೂರವಾದ ಮಾತು. 24 ವರ್ಷಗಳ ಹಿಂದಿನ ಮನವಿಗೆ ಇಲ್ಲಿಯವರೆಗೂ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ. ಯಡಿಯೂರಪ್ಪ ಅವಧಿಯಲ್ಲಿ ಆಗದಿದ್ದರೆ ಇನ್ಯ್ನಾವತ್ತೂ ಆಗುವುದಿಲ್ಲ. ಹೀಗಾಗಿಯೇ ಅನಿವಾರ್ಯವಾಗಿ ಹೋರಾಟ ಕೈಗೆತ್ತಿಕೊಂಡಿದ್ದೇವೆ ಹೊರತು ಇದು ಬ್ಲ್ಯಾಕ್‌ಮೇಲ್ ಅಲ್ಲ’ ಎಂದರು.

‘ಸಮಾಜದ ಮೀಸಲಾತಿ ಹೋರಾಟಕ್ಕೂ ಸಚಿವ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ. ಪಂಚಮಸಾಲಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕೊಡಲಿ ಇಲ್ಲವೇ ಬಿಡಲಿ, ಅದು ಮುಖ್ಯವಲ್ಲ. ನಮ್ಮ ಮೀಸಲಾತಿ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ’ ಎಂದು ಒತ್ತಾಯಿಸಿದರು.

ದೆಹಲಿಯ ರೈತ ಹೋರಾಟಗಾರರಿಗೆ ಬಸವ ಕೃಷಿ ರಾಷ್ಟ್ರೀಯ ಪ್ರಶಸ್ತಿ

ಬಾಗಲಕೋಟೆ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ನೀಡುವ ‘ಬಸವ ಕೃಷಿ ರಾಷ್ಟ್ರೀಯ ಪ್ರಶಸ್ತಿ‘ಯನ್ನು ಈ ಬಾರಿ ದೆಹಲಿಯ ರೈತ ಹೋರಾಟಗಾರರಿಗೆ ಅರ್ಪಿಸಲಾಗಿದೆ ಎಂದು ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಶಸ್ತಿ ಮೊತ್ತ ₹ 1 ಲಕ್ಷ ನಗದು, ಪುರಸ್ಕಾರ ಹಾಗೂ ತಾಮ್ರ ಪತ್ರ ಒಳಗೊಂಡಿದೆ. ದೆಹಲಿಯಲ್ಲಿ ರೈತರ ಹೋರಾಟ ಮುಗಿದ ಮೇಲೆ ಅದರ ನಾಯಕರನ್ನು ಶ್ರೀ ಪೀಠಕ್ಕೆ ಕರೆದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವರ್ಷ ಸಂಕ್ರಾಂತಿ ದಿನ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಹೀಗಾಗಿ ಪ್ರಶಸ್ತಿ ವಿತರಣೆ ಸಮಾರಂಭ ಮುಂದೂಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.