ADVERTISEMENT

ಮೀಸಲಾತಿ ಭಿಕ್ಷೆಯಲ್ಲ, ಹಕ್ಕು: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 17:05 IST
Last Updated 21 ಫೆಬ್ರುವರಿ 2021, 17:05 IST
ಬೆಂಗಳೂರಿನಲ್ಲಿ ರಸ್ತೆ ತಡೆದು ಪ್ರತಿಭಟಿಸುತ್ತಿರುವ ಪಂಚಮಸಾಲಿ ಜನರು
ಬೆಂಗಳೂರಿನಲ್ಲಿ ರಸ್ತೆ ತಡೆದು ಪ್ರತಿಭಟಿಸುತ್ತಿರುವ ಪಂಚಮಸಾಲಿ ಜನರು   

ಬೆಂಗಳೂರು: ‘ಪಂಚಮಸಾಲಿ ಸಮುದಾಯದ ಪಾಲಿಗೆ ಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ಸಂವಿಧಾನದ ಅಡಿಯಲ್ಲಿ ಇತರರಿಗೆ ಕೊಟ್ಟ ಹಕ್ಕನ್ನು ನಮಗೂ ಕೊಡಿ ಎಂಬುದೇ ನಮ್ಮ ಬೇಡಿಕೆ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ‘ಸಮುದಾಯದ ಬಡ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಹೋರಾಟ ನಡೆಯುತ್ತಿದೆ. 26 ವರ್ಷಗಳಿಂದಲೂ ನಡೆಯುತ್ತಿದೆ. ನಾವು ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಕೇಳುತ್ತಿದ್ದೇವೆ’ ಎಂದರು.

2007 ರವರೆಗೂ ಪಂಚಮಸಾಲಿ ಸಮುದಾಯ ಕರ್ನಾಟಕದ ಜಾತಿ ಪಟ್ಟಿಯಲ್ಲಿ ಇರಲೇ ಇಲ್ಲ. ಸಮುದಾಯದ ರಾಜ್ಯ ಸಂಘದಿಂದ ಹೋರಾಟ ನಡೆಸಿದ ಫಲವಾಗಿ 2007ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮುದಾಯವನ್ನು ಜಾತಿ ಪಟ್ಟಿಗೆ ಸೇರಿಸಿದರು. ಆ ನಂತರ ಸಮುದಾಯಕ್ಕೆ ನ್ಯಾಯ ದೊರಕಿಲ್ಲ‘ ಎಂದು ಹೇಳಿದರು.

ADVERTISEMENT

ಈಗ ಅದೇ ಯಡಿಯೂರಪ್ಪ ಸಮುದಾಯದ ಬೇಡಿಕೆ ಈಡೇರಿಸುತ್ತಾರೆ ಎಂಬ ಭರವಸೆ ಇದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸುವ ಅಧಿಕಾರ ಕೇಂದ್ರ ಸರ್ಕಾರದ್ದಲ್ಲ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಯ ಅಧಿಕಾರ’ ಎಂದು ಹೇಳಿದರು.

ಈ ಹೋರಾಟ ಯಾವುದೇ ಪಕ್ಷ ಅಥವಾ ವ್ಯಕ್ತಿಯ ವಿರುದ್ಧದ ಪ್ರತಿಭಟನೆ ಅಲ್ಲ. ಯಾರನ್ನೂ ಮೆಚ್ಚಿಸುವ ಅಥವಾ ಬೇಸರ ಮೂಡಿಸುವ ಉದ್ದೇಶದ್ದೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಜನರಲ್ಲಿ ಸಂಶಯವಿತ್ತು

‘ಪಾದಯಾತ್ರೆಗೆ ಹರಿಹರ ಪೀಠ ಬೆಂಬಲಿಸುವುದಿಲ್ಲ, ಎರಡೂ ಪೀಠಗಳ ನಡುವೆ ಸಹಮತ ಇಲ್ಲ ಎಂಬ ಭಾವನೆ ಅನೇಕರಲ್ಲಿತ್ತು. ಪಾದಯಾತ್ರೆ ಹರಿಹರಕ್ಕೆ ಬಂದಾಗ ಹೋರಾಟ ವಿಫಲವಾಗುತ್ತದೆ ಎಂದು ಊಹಿಸಿದ್ದರು. ಆದರೆ, ನಾವಿಬ್ಬರೂ ಒಂದೇ ಆಗಿದ್ದೀವಿ. ಬಹಿರಂಗವಾಗಿ ಒಂದಾಗಿದ್ದೇವೆ. ಅದಕ್ಕಾಗಿ ನಾಯಕರು, ಜನರು ಒಂದಾದರು’ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.