ADVERTISEMENT

ಪಂಚಮಸಾಲಿ ಮೀಸಲಾತಿ ಹೋರಾಟ ಸ್ಥಗಿತ: ಸಮಿತಿ ನಿರ್ಧಾರ

ತೀರ್ಮಾನ ವಿರೋಧಿಸಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತ್ಯಜಿಸಿದ ಕಾಶಪ್ಪನವರ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 19:02 IST
Last Updated 25 ಮಾರ್ಚ್ 2023, 19:02 IST
   

ಬೆಂಗಳೂರು: ವೀರಶೈವ ಲಿಂಗಾಯ ತರಿಗೆ ಪ್ರವರ್ಗ 2ಡಿ ಅಡಿ ಶೇ 7 ಮೀಸಲಾತಿ ಕಲ್ಪಿಸಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಒಪ್ಪಿ, ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ನಿರ್ಧರಿಸಿದೆ. ಆದರೆ, ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಅಡಿ ಶೇ 15ರಷ್ಟು ಮೀಸಲಾತಿ ಆಗ್ರಹಿಸಿ ಕಳೆದ 70 ದಿನಗಳಿಂದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸುತ್ತಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಸ್ವಾಮೀಜಿಯ ನಿರ್ಧಾರವನ್ನು ಹೋರಾಟ ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ ಅನುಮೋದಿಸಿದರು. ಆದರೆ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರು ವಿರೋಧಿ ಸಿದರು.‘ನಮ್ಮ ಬೇಡಿಕೆಯ ಬಗ್ಗೆ ಯತ್ನಾಳ ಅವರು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ತಡವಾಗಿಯಾದರೂ ಎಲ್ಲ ಲಿಂಗಾಯತ ಸಮುದಾಯದೊಂದಿಗೆ ನಮಗೂ ಮೀಸಲಾತಿ ಕಲ್ಪಿಸಿರುವುದು ಸಮಾಧಾನ ತಂದಿದೆ. ನಮ್ಮ ಹೋರಾಟಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಬೆಂಬಲ ನೀಡಲಿಲ್ಲ. ಸಿದ್ದಗಂಗಾ ಮಠ ಮತ್ತು ಉತ್ತರಕರ್ನಾಟಕದ ಕೆಲವು ಮಠಗಳನ್ನು ಬಿಟ್ಟರೆ ಬೇರೆ ಯಾವುದೇ ಮಠಗಳು ಬೆಂಬಲಕ್ಕೆ ನಿಲ್ಲಲಿಲ್ಲ.
ಶೇ 100ರಷ್ಟು ನಮ್ಮ ಗುರಿ ಈಡೇರದಿದ್ದರೂ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ಇಟ್ಟಿದ್ದೇವೆ’ ಎಂದು ಸ್ವಾಮೀಜಿ ಭಾವುಕರಾದರು.

ADVERTISEMENT

‘ಪ್ರವರ್ಗ 2ಎಯಲ್ಲಿ ಏನೆಲ್ಲಾ ಸವಲತ್ತುಗಳು ಇವೆಯೋ ಅವೆಲ್ಲವೂ 2ಡಿಯಲ್ಲಿಯೂ ಸಿಗಲಿದೆ ಎಂದು ದೃಢೀಕರಿಸಿ
ಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದೇವೆ. ಆದರೆ, ರಾಜ್ಯ ಸರ್ಕಾರವು ಸಚಿವ ಸಂಪುಟದ ತೀರ್ಮಾನದ ರಾಜ್ಯಪತ್ರ ಅಧಿಸೂಚನೆಯನ್ನು ನೀತಿಸಂಹಿತೆ ಜಾರಿಗೆ ಮೊದಲೇ ಹೊರಡಿಸಬೇಕು. ಅಲ್ಲಿಯವರೆಗೆ ನಾನುಕೂಡಲಸಂಗಮಕ್ಕೆ ಹೋಗುವುದಿಲ್ಲ’ ಎಂದು ಸ್ವಾಮೀಜಿ ಶಪಥ ಮಾಡಿದರು. ಕೇಂದ್ರದ ಒಬಿಸಿ ಮೀಸಲಾತಿಗಾಗಿ ಚುನಾವಣೆ ಬಳಿಕ ಹೋರಾಟ ಮುಂದುವರಿಸೋಣ ಎಂದೂ ಅವರು ಸ್ವಾಮೀಜಿ ಕರೆ ನೀಡಿದರು.

ಯತ್ನಾಳ ಮಾತನಾಡಿ, ‘ಸ್ವಾಮೀಜಿಯ ನಿರಂತರ ಹೋರಾಟದಿಂದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನನ್ನನ್ನು ಮೂರು ಬಾರಿ ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ನ್ಯಾಯಾಲಯ ಕೂಡಾ ಹೊಸ ಪ್ರವರ್ಗ ಮಾಡಲು ಅನುಮತಿ ಕೊಟ್ಟಿದೆ. ನಮ್ಮದು ರಾಜಕೀಯ ಲಾಭಕ್ಕಾಗಿ ಹೋರಾಟವಲ್ಲ, ಸಮುದಾಯದ ಒಳಿತಿಗಾಗಿ ಹೋರಾಟ. ಈಗ ಈ ಸತ್ಯಾಗ್ರಹ ಸ್ಥಗಿತಗೊಳಿಸುತ್ತೇವೆ’ ಎಂದರು.

ಈ ಜಯ ನಾನು ಒಪ್ಪಲ್ಲ: ಕಾಶಪ್ಪನವರ

ಮೀಸಲಾತಿ ಹೋರಾಟ ಸ್ಥಗಿತಗೊಳಿಸಿದ ಸ್ವಾಮೀಜಿ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ ವಿಜಯಾನಂದ ಕಾಶಪ್ಪನವರ, ‘ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದರು.

‘ಸರ್ಕಾರ ಘೋಷಿಸಿರುವ ಮೀಸಲಾತಿ ಚುನಾವಣೆಗೆ ಮಾಡಿರುವ ತಂತ್ರದಂತೆ ಕಾಣಿಸುತ್ತಿದೆ. 2ಎಗೆ ಸಿಗುತ್ತಿರುವ ಸವಲತ್ತುಗಳನ್ನು ‌ಕೊಡಬೇಕು ಎಂದು ನಾವು ಪಕ್ಷಾತೀತವಾಗಿ ಹೋರಾಟ ಮಾಡಿದ್ದೇವೆ. ಆದರೆ, ಸರ್ಕಾರ ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು ನಮಗೆ ನೀಡಿದೆ. ಆ ಮೂಲಕ, ನಮ್ಮ ಮೇಲೆ ಗೂಬೆ ಕೂರಿಸುವ ಕುತಂತ್ರ ಮಾಡಿದೆ. ಲಿಂಗಾಯತ ಹಾಗೂ ಮುಸ್ಲಿಮರ ಮಧ್ಯೆ ಜಗಳ ಹಚ್ಚಲು ಈ ಮೀಸಲಾತಿ ಕೊಟ್ಟಿದ್ದಾರೆ. ಸ್ವಾಮೀಜಿ ಮೇಲೆ ಒತ್ತಡ ಹಾಕಿ ಈ ರೀತಿ ಹೇಳಿಸಿದ್ದಾರೆ. ಇದನ್ನು ನಾನು ತಿರಸ್ಕರಿಸುತ್ತೇನೆ’ ಎಂದೂ ಅವರು ಹೇಳಿದರು.
***
ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿರುವ ಆದೇಶದ ಪ್ರತಿ ಸಿಕ್ಕಿಲ್ಲ. ಅದು ಸಿಕ್ಕ ನಂತರ ಅಧ್ಯಯನ ನಡೆಸಿ ಪ್ರತಿಕ್ರಿಯಿಸಲಾಗುವುದು
-ನಂಜಾವಧೂತ ಸ್ವಾಮೀಜಿ, ಪೀಠಾಧ್ಯಕ್ಷರು, ಸ್ಫಟಿಕಪುರಿ ಸಂಸ್ಥಾನ ಮಠ, ಪಟ್ಟನಾಯಕನಹಳ್ಳಿ, ಶಿರಾ ತಾಲ್ಲೂಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.