ಭೋಪಾಲ: ಮದ್ಯ ಖರೀದಿಸಲು ಬರುವವರ ಮೇಲೆ ನಿಗಾ ಇಡಲು ಮಧ್ಯಪ್ರದೇಶದ ಹೋಶಂಗಬಾದ್ ಜಿಲ್ಲೆಯ ಅಬಕಾರಿ ಅಧಿಕಾರಿ ವಿಶಿಷ್ಟ ಮಾರ್ಗ ಅನುಸರಿಸಿದ್ದಾರೆ. ಮದಿರೆ ಕೊಳ್ಳಲು ಬರುವವರ ಬೆರಳಿಗೆ ಶಾಯಿಹಾಕಲು, ಸಂಪರ್ಕ ಮಾಹಿತಿ ಪಡೆದುಕೊಳ್ಳಲು ಅವರು ತಮ್ಮ ವ್ಯಾಪ್ತಿಯ ಎಲ್ಲ ಅಂಗಡಿಗಳಿಗೆ ಸೂಚನೆ ನೀಡಿದ್ದಾರೆ.
‘ಹೋಶಂಗಬಾದ್ ಜಿಲ್ಲಾ ವ್ಯಾಪ್ತಿಯ ಅಂಗಡಿಗಳಲ್ಲಿ ಮದ್ಯ ಖರೀದಿಗೆ ಬರುವವರಿಗೆ ಅಳಿಸಲಾಗದ ಶಾಯಿಯನ್ನು ತೋರು ಬೆರಳಿಗೆ ಹಾಕಲು ಸೂಚಿಸಲಾಗಿದೆ. ಜನರನ್ನು ಪತ್ತೆ ಹಚ್ಚಲು ಈ ಉಪಾಯ ಮಾಡಲಾಗಿದೆ,’ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ಅಬಿಷೇಕ್ ತಿವಾರಿ ಎಎನ್ಐಗೆ ತಿಳಿಸಿದ್ದಾರೆ.
ಬೆರಳಿಗೆ ಶಾಯಿಯೊಂದೇ ಅಲ್ಲದೆ, ಮದ್ಯ ಖರೀದಿಸಲು ಬರುವ ಎಲ್ಲರ ದೂರವಾಣಿ ಸಂಖ್ಯೆ, ಮನೆ ವಿಳಾಸವನ್ನು ಪಡೆಯಲಾಗುತ್ತಿದೆ. ಒಂದು ವೇಳೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡರೆ ಜನರನ್ನು ಪತ್ತೆ ಮಾಡಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ತೀವಾರಿ ತಿಳಿಸಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಅಂಗಡಿಗಳು ತೆರೆದವಾದರೂ, ಶಾಯಿ ಪ್ರಯೋಗದಿಂದಾಗಿ ಜನಸಂದಣಿ ಸೃಷ್ಟಿಯಾಗಲಿಲ್ಲ ಎಂದು ಅವರು ಹೇಳಿದರು.
ಒಂದು ಬಾರಿ ಮದ್ಯ ಖರೀದಿಸಿ ಹೋದ ವ್ಯಕ್ತಿಯೊಬ್ಬ ಮರಳಿ ಅದೇ ದಿನ ಅಂಗಡಿಗೆ ಬರುವುದನ್ನು ಶಾಯಿ ಗುರುತು ತಡೆಯುತ್ತಿದೆ. ಅಲ್ಲದೆ, ಅಂಗಡಿ ಎದುರು ಉಂಟಾಗುವ ಅನಗತ್ಯ ಜನಸಂದಣಿ ನಿಯಂತ್ರಣಗೊಂಡಿದೆಎಂದು ಅಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.